Saturday, 30 July 2016

ಬಾಲ್ಯದ ಮಳೆಗಾಲ.....

ಏಪ್ರಿಲ್ ಮತ್ತು ಮೇ ತಿಂಗಳ ಬೇಸಿಗೆ ರಜೆಯ ನಂತರ ಜೂನ್ ತಿಂಗಳು ಬಂತಂದರೆ ಶಾಲೆ ಪುನರಾರಂಭದ ಸಂಭ್ರಮ. ಜೂನ್ ಒಂದಕ್ಕೆ ಶಾಲೆ ಶುರುವಾದರೆ ಜೂನ್ ೬ ರಿಂದ ಮಳೆಗಾಲ ಶುರುವಾಗುವ ವಾಡಿಕೆ. ಒಮೊಮ್ಮೆ ಸ್ವಲ್ಪ ಆಚೀಚೆ ಆದರೂ ಜೂನ್ ಮೊದಲ ವಾರಕ್ಕೆ ಮಳೆರಾಯ ಆಗಮನವತ್ತೂ ಖಚಿತ. ಹೊಸವರ್ಷದ ಹೊಸ ತರಗತಿಗೆ ಹೋಗುವ ಉತ್ಸಾಹ ಒಂದೆಡೆಯಾದರೆ ಮಳೆಯ ಕಿರಿಕಿರಿಯು ಅಕ್ಷರಸಃ ಉತ್ಸಾಹಕ್ಕೆ ತಣ್ಣೀರು ಎರೆಚುತಿತ್ತು. ಕರಾವಳಿಯ ಜಿಲ್ಲೆಗಳಲ್ಲಿ ಜೂನ್ ತಿಂಗಳಿನಿಂದ ಸೆಪ್ಟೆಂಬರ್ ವರೆಗಿನ ವರುಣ ದೇವ ಮನೆಮಾಡುವುದು ಸಾಮಾನ್ಯ. ಕರಾವಳಿಯ ಮಳೆಯು ದಪ್ಪ-ದಪ್ಪಗಿನ ಹನಿಗಳಿಂದ ಕೂಡಿದ್ದು ಬೀಸುವ ಗಾಳಿಯಿಂದ ಓರೆಯಾಗಿ ಬೀಳುತ್ತಾ ನಮ್ಮನ್ನು ಒದ್ದೆಯಾಗಿಸುತ್ತದೆ. ಹಿಡಿದಿರುವ ಕೊಡೆ ಹೆಸರಿಗಷ್ಟೇ!!!. ಬಾಲ್ಯದಲ್ಲಿ ಮಳೆಯಲ್ಲಿ ತೊಯ್ದಕೊಂಡು ಶಾಲೆಗೆ ಹೋಗುತ್ತಿದ್ದದ್ದು, ಮಳೆ ನೀರಿನ ಆಟ, ಇತ್ಯಾದಿಗಳು ಎಂದಿಗೂ ಹಸಿ ಹಸಿ ನೆನಪುಗಳು!!!...


ನಮ್ಮ ಶಾಲೆಯ ಮನೆಯೊಂದ ಒಂದೂವರೆ ಕಿಲೋಮೀಟರ್ ದೂರದಲ್ಲಿತ್ತು. ಒಂದು-ಎರಡು ತರಗತಿಗಳಲ್ಲಿರುವಾಗ ಅಕ್ಕನ ಕೊಡೆಯೇ ಆಸರೆ. ಆವಾಗೆಲ್ಲ ಹತ್ತಿ ಬಟ್ಟೆಯ ಉದ್ದ ಕೋಲಿನ ಕೊಡೆಗಳು... ಕೊಟ್ಟ ದುಡ್ಡಿಗೆ ಸರಿಯಾಗಿ ಅವುಗಳ ದಪ್ಪ... ತೆಳ್ಳಗಿನ ಕೊಡೆ ಜೂನ್- ಜುಲೈ ನ ಜಡಿಮಳೆಯನ್ನು ತಡೆಯುವುದರಲ್ಲಿ ಸಂಪೂರ್ಣ ವಿಫಲ! ನೇರವಾಗಿ ಮಳೆಯ ಹನಿಯು ಮೈಗೆ ಬೀಳುವುದಿಲ್ಲ ಅಷ್ಟೇ!!  ತೂರಿಬಂದ ನೀರಿನ ಹನಿಗಳು ೧೫ ನಿಮಿಷದ ಮಳೆಯಲ್ಲಿ ನಮ್ಮನ್ನು ಒದ್ದೆಯಾಗಿಸುತಿತ್ತು... ದಪ್ಪನೆಯ ಬಟ್ಟೆಯ ಹಾಗೂ ಎರಡು ಹೊದಿಕೆಯ ಕೊಡೆಗಳೂ ಸಿಗುತಿದ್ದವಾದರೂ ಒದ್ದೆಯಾದ ಮಣಭಾರದ ಆ ಕೊಡೆಗಳನ್ನು ಹೊರುವುದೊಂದು ಸಾಹಸವೇ... ಒಂದೇ ಕೊಡೆಯ ಆಶ್ರಯದಲ್ಲಿ ಅಕ್ಕ ಮತ್ತು ನಾನು ಶಾಲೆಗೆ ಹೋಗುತಿದ್ದೆವು. ಚೀಲಕ್ಕೆ ಹಾಕಿದ ಪುಸ್ತಕಗಳು ಒದ್ದೆಯಾಗದಂತೆ ಪುಸ್ತಕಗಳನ್ನು ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿ, ಇಬ್ಬರ ಮಧ್ಯ ಇಟ್ಟುಕೊಂಡು ಹೋಗುತಿದ್ದೆವು. ಕೈಯಲ್ಲೊಂದು ಬುತ್ತಿ-ಡಬ್ಬ...ಮಳೆಯಲ್ಲಿ ತೊಯ್ದ ಬುಟ್ಟಿಯಲ್ಲಿರುವ ಕೊಚ್ಚಿಗೆ ಅನ್ನ ಸಂಪೂರ್ಣ ತಣ್ಣಗಾಗಿರುತಿತ್ತು. ಇನ್ನೊಂದು ಸಮಸ್ಯೆಯಂದರೆ ಒದ್ದೆಯಾದ ಕೊಡೆಗಳನ್ನು ತರಗತಿಯ ಹೊರಗೆ ಕಟ್ಟಿರುವ ಸರಿಗೆಯಲ್ಲಿ ನೇತಾಕಿರಬೇಕಿತ್ತು... ತರಗತಿಗಳು ಮುಗಿದ ತಕ್ಷಣ ಬಂದರೆ ಕೊಡೆಗಳು ಇಟ್ಟ ಸ್ಥಳದಲ್ಲಿ ಸಿಗುತ್ತಿದ್ದವು...ಇಲ್ಲವಾದರೆ ಚಿಕ್ಕ-ಚಿಕ್ಕ ಕಳ್ಳ ಪೋರರು ಕೊಡೆಯನ್ನು ಎತ್ತಿಕೊಂಡೇ ಬಿಡುತ್ತಿದ್ದರು. ಕೊಡೆಗಳಲ್ಲಿ ಹೆಸರು ಬರೆದಿಡುವುದೂ ಅನಿವಾರ್ಯ. ತರಗತಿಗಳು ಮುಗಿಯುವ ಸಮಯದಲ್ಲಿ ಅಧ್ಯಾಪಕರು ಕೊಡೆಯಿಡುವ ಜಾಗಕ್ಕೆ ಬಂದು ನೋಡುತ್ತಾ ಆ ಕಳ್ಳ ಪೋರರಿಂದ ಕೊಡೆಗಳನ್ನು ರಕ್ಷಿಸುತಿದ್ದರು!!! ಶಾಲೆಯ ದಾರಿಯು ಮಣ್ಣೆನ ರಸ್ತೆಯಾಗಿದ್ದಲ್ಲದೆ ಏರಿಕೆಯದ್ದಾಗಿತ್ತು. ಚರಂಡಿಗಳಿಲ್ಲದ ಈ ರಸ್ತೆಯಲ್ಲಿ ಮಳೆಯನೀರು ಹರಿದುಹೋಗುವುದು ಸಾಮಾನ್ಯ. ಮಳೆ ಬಂದು ಕೆಲವೇ ದಿನಗಳಲ್ಲಿ ರಸ್ತೆಯಲ್ಲಿ ಪಾಚಿ ಬೆಳೆದುಕೊಂಡಿದ್ದು ನಮ್ಮನ್ನು ಬೀಳಿಸಲು ಕಾದುಕೊಂಡಿರುತ್ತಿತ್ತು. ಹೆಜ್ಜೆಮೇಲೊಂದ್ ಹೆಜ್ಜೆಯನಿಟ್ಟುಕೊಂಡು ನಡೆಯಬೇಕಿತ್ತು...  ಆ ಜಾರಿಕೆಯ ರಸ್ತೆಯಲ್ಲಿ ಹಲವಾರು ಭಾರಿ ಬಿದ್ದು-ಎದ್ದು ಹೋಗುತಿದ್ದೆವು. ಕೆಲವೂಮ್ಮೆ ಒಬ್ಬರು ಜಾರಿ ಅವರನ್ನು ಬೀಳುವುದನ್ನು ತಡೆಯಲು ಹೋದೆ ಇನ್ನೊಬ್ಬರು, ಹಾಗೆ ಮತ್ತೊಬ್ಬರೂ ಬಿದ್ದು "ಸರಣಿ ಅಪಘಾತ"ಗಳಾಗುತ್ತಿದ್ದವು.
ಮಳೆಗಾಲ ಇನ್ನೊಂದು ಆಕರ್ಷಣೆಯೇ ಮಳೆಗಾಲದ ಬರುವಿಕೆಯ ಕೂಗಿ ಕೂಗಿ ಹೇಳುವ ಕಪ್ಪೆಗಳು!! ಹಿಂದಿನ ಮಳೆಗಾಲ ಮುಗಿಯುತ್ತಿದ್ದಂತೆ ಮಣ್ಣಿನಡಿ ಕಣ್ಮರೆಯಾಗಿದ್ದ ಕಪ್ಪೆಗಳು ಹೊರಬಂದು  "ವಾಟ್.. ವಾಟರ್..ವಾಟ್... ವಾಟರ್.."(what water?!!!...what water ?!!!) ಎನ್ನುತ್ತಾ ಮಳೆಗಾಲದ ಮುನ್ಸೂಚನೆ ಕೊಡುತ್ತವೆ. ಆ ಪುಟ್ಟ ಪ್ರಾಣಿಗೆ ಮಳೆಯ ಬರುವಿಕೆಯ ಭವಿಷ್ಯ ಹೇಗೆ ತಿಳಿಯುತ್ತದೆಯೋ ಗೊತ್ತಿಲ್ಲ... ಒಂದು ಶುರುಮಾಡಿದರೆ ಸಾಕು, ಅಲ್ಲೊಂದು-ಇಲ್ಲೊಂದು-ಮತ್ತೆಲ್ಲೋ ಇನ್ನೊಂದು ಹೀಗೆ ಅವುಗಳ ಜುಗಲ್ಬಂದಿ ಶುರು!!! ರಾತ್ರಿ-ಹಗಲೆನ್ನದೇ ಕೂಗಿ-ಕೂಗಿ ತನ್ನ ಸಂಗಾತಿಯನ್ನು ಕರೆದು ಸಂತಾನೋತ್ಪತ್ತಿ ಮಾಡುವುದೇ ಈ ಕೂಗಿನ ಮರ್ಮ... ಅದೇನೇ ಆಗಲಿ ನಮಗಂತೂ ಇಡೀ ದಿನ ಕರ್ಕಶ ಸಂಗೀತ ಕಛೇರಿ..! ಈ ಸಂಗೀತ ಕಛೇರಿಗೆ ಸಾಥ್ ಕೊಡುತಿದ್ದವು ಕರ್ಕಶ ಕೂಗಿನ ಜೀರಂಡೆಗಳು... ನಾವು ಸಣ್ಣದಿದ್ದಾಗ ಜೀರಂಡೆಗಳನ್ನು ನೋಡಲೇ ಇಲ್ಲ!!!. ಕಾಣಲು ಗುಪ್ತವಾಗಿರುವ ಇವುಗಳ ಕೂಗಿನ ಶಬ್ದ ಕೇಳಿದ ಹೊಸಬರು ಇದೇನು ಬ್ರಹತ್ ಗಾತ್ರದ ಪ್ರಾಣಿಯೇ ಅಂದುಕೊಳ್ಳಬೇಕು. ನಿಶಬ್ದದ ರಾತ್ರಿಯಲ್ಲಿ ಈ ಕರ್ಕಶ ಕೂಗು horror movie ಯ ಹಿಮ್ಮೇಳದಂತೆ ಕೇಳಿಸಿ ಭಯ ಹುಟ್ಟಿಸಿತಿತ್ತು... ಹಲವು ವರ್ಷಗಳ ನಂತರ ಜೀರಂಡೆ ಗಳ ಅಸಲೀ ಗಾತ್ರ ತಿಳಿದಾಗಲೇ ಆ ಭಯ ನಿವಾರಣೆಯಾಗಿದ್ದು... ಜೀರಂಡೆ ಗಳ ಈ "ಕ್ರಿ ಕ್ರಿ ಕ್ರಿ ಕ್ರಿ.... ..... " ಕೂಗಿನಿಂದಲೇ ಇವುಗಳಿಗೆ ಇಂಗ್ಲೀಷಿನಲ್ಲಿ  "Cricket" ಎಂದು ಕರೆದಿರಬೇಕು!!!. ಕಪ್ಪೆ-ಜೀರಂಡೆಗಳ ಹಿಮ್ಮೇಳದ ಮುಮ್ಮೇಳವೆನು ಗೊತ್ತೇ?... ಕಗ್ಗತ್ತಲ ರಾತ್ರಿಯಲ್ಲಿ ನಕ್ಷತ್ರದಂತೆ ಹೊಳೆಯುವ "ಮಿಂಚುಹುಳ"ಗಳು... ಬಾಲ್ಯದ ಕುತೂಹಲದ ನೈಸರ್ಗಿಕ ಕೌತುಕಗಳ ಪಟ್ಟಿಯಲ್ಲಿ ಇದೂ ಒಂದು. ಮರದ ರೆಂಬೆ-ಕೊಂಬೆಗಳಲ್ಲಿ ಸಾವಿರಾರು ಮಿಂಚುಹುಳಗಳು ಕೂತು ತನ್ನ ದೇಹವನ್ನು ಬೆಳಗುತ್ತಾ ಇಂದ್ರಜಾಲವನ್ನು ಸ್ರಷ್ಟಿಸುತಿದ್ದವು. ಆಗ ನಮಗೆ ವಿಸ್ಮಯವಾಗಿದ್ದ ಈ ಮಿಂಚುಹುಳ ಈಗ ಮಾಮೂಲೆನಿಸಿದರೂ ಇಂದಿಗೂ ಚಿಕ್ಕ ಮಕ್ಕಳು ಈ ಹುಳಗಳನ್ನು ಕುತೂಹಲದಿಂದಲೇ ನೋಡುತ್ತಾರೆ. ಹಿಂದಿನ ಕಾಲದಲ್ಲಿ ಕಾರ್ಮೋಡ ತುಂಬಿದ ಕಗ್ಗತ್ತಲೆಯ ರಾತ್ರಿಯಲ್ಲಿ ದಾರಿದೀಪಕ್ಕಾಗಿ ಮಿಂಚುಹುಳಗಳನ್ನು ಗಾಜಿನ ಬುರುಡೆಯಲ್ಲಿ ಹಾಕಿಕೊಂಡು ಹೋಗುತ್ತಿದ್ದರಂತೆ!!!
ಮೊದಲ ಮಳೆಯ ಮಾರನೇ ದಿನ ಮುಸ್ಸಂಜೆಯ ಇನ್ನೊಂದು ಕುತೂಹಲಕರ ವಿದ್ಯಮಾನವೇ "ಹಾರುವ ಇರುವೆಗಳು". ಸಂಜೆಯ ಸಮಯದಲ್ಲಿ ಎಲ್ಲಿ ನೋಡಿದರೂ ಅಲ್ಲಿ ಮಳೆಗೆ ಒದ್ದೆಯಾದ ನೆಲವನ್ನು ಕೊರೆದುಕೊಂಡು ಸಾಲು-ಸಾಲಾಗಿ ಇರುವೆಗಳು ಬರಲು ಪ್ರಾರಂಭಿಸುತ್ತವೆ.!!! ಹಾಗೆ ಬಂದ ಈ ಇರುವೆಗಳು ಕ್ಷಣ ಮಾತ್ರದಲ್ಲಿ ಬಾನಿನ ಮುಖಮಾಡಿ ಹಾರಲು ಶುರುಮಾಡುತ್ತವೆ.!!! ಅವುಗಳು ಹಿಂಡು ಹಿಂಡಾಗಿ ಬರುವುದು ಎಷ್ಟು ವಿಚಿತ್ರವೋ, ಅಷ್ಟೇ ವಿಚಿತ್ರ ಅವುಗಳ ಆಕಾಶಯಾನ... "ಇವುಗಳು ಹೋಗುವುದಾದರೂ ಎಲ್ಲಿಗೆ?... , ಸ್ವಲ್ಪ ಸಮಯದ ನಂತರ ವಾಪಸು ಬರುತ್ತವೆಯೇ?, ಇವುಗಳು ಇರುವೆಗಳೇ ಅಥವಾ ಕೀಟಗಳೇ ? ಮೊದಲ ಮಳೆ ಮಾರನೇ ದಿನವೇ ನೆಲದಿಂದ ಹೊರಬರುವುದಾದರೂ ಯಾವುದಕ್ಕೆ...?" ಹೀಗೆ ಸಾಲು ಸಾಲು ಪ್ರಶ್ನೆಗಳು ನಮ್ಮ ಮುಂದೆ ಬರುತ್ತಿದ್ದವು. ಅವಾಗ ಸಿಗುತ್ತಿದ್ದ ತಾತ್ಕಾಲಿಕ ಉತ್ತರ- " ಮಳೆಯ ನೀರು ಇರುವೆಗಳ ಗೂಡಿಗೆ ಹೋಗುವುದರಿಂದ ಇವುಗಳು ಮೇಲೇಳುತ್ತಿರುವುದು ".... ಸರಿಯಾದ ಕಾರಣವೇನು ಗೊತ್ತೇ?.... ನೆಲದಡಿಯ ಕಾಲೋನಿಗಳಲ್ಲಿರುವ ಈ ಇರುವೆಗಳು ಮಳೆ ಬಂದಾಕ್ಷಣ ಸಂತಾನೋತ್ಪತ್ತಿಗೆ ಸರಿಯಾದ ಸಮಯ ಎಂದುಕೊಂಡು ಹೆಣ್ಣು-ಗಂಡು ಎರಡು ಹೊರಬಂದು ಹಾರುತ್ತಾ ಮಿಲನವಾಗುತ್ತವೆ. ತನ್ನ ಜೀವನದ ಧ್ಯೇಯವನ್ನು ಪೂರೈಸಿದ ಗಂಡು ಇರುವೆ ಮಿಲನವಾದ ಕೆಲವೇ ಸಮಯದಲ್ಲಿ ಸತ್ತುಹೋದರೆ, ಹೆಣ್ಣು ಇರುವೆ ರೆಕ್ಕೆಗಳನ್ನು ಕಳಚಿಕೊಂಡು ತನ್ನ ಆಯ್ಕೆಯ ಜಾಗದಲ್ಲಿ ಕಾಲೋನಿ ಕಟ್ಟುತ್ತದೆ... ಕೀಟ ಪ್ರಪಂಚದ ಅನೇಕಾನೇಕ ವಿಸ್ಮಯಗಳಲ್ಲಿ ಇದೂ ಒಂದು.
ಬಾಲ್ಯದ ಮರೆಯಲಾಗದ ನೆನಪುಗಳನ್ನು ಇನ್ನೊಂದು ಪ್ರಮುಖವಾಗಿರುವುದು ವಿಚಿತ್ರವಾಗಿ, ಭಯಂಕರವಾಗಿ ಕೂಗುತ್ತಿದ್ದ ಒಂದು ಹಕ್ಕಿ... ಈ ಹಕ್ಕಿಯ ಕೂಗು ದಿನದುದ್ದಕ್ಕೂ ಕೇಳಿಬಂದರೂ ರಾತ್ರಿ ನಿಶಬ್ದವಾದಾಗ ಕೇಳಿದಾಗ ಬಾಯಹುಟ್ಟಿಸುತಿತ್ತು. "Thooo...Thu...Thoo " ಎಂದು ಕೂಗುವ ದನಿ ಅರ್ಧ ನಿದ್ರೆಯಿಂದೆದ್ದಾಗ ಕೇಳಿಸಿದರೆ ಅಂಜಿಕೆಯಿಂದ ತುಂಬಾ ಸಮಯ ನಿದ್ರೆಯೇ ಬರುತ್ತಿರಲಿಲ್ಲ. ಅದೆಷ್ಟೋ ವರ್ಷಗಳ ನಂತರ ಈಗ ಗೊತ್ತಾಗಿದ್ದು ಈ ಹಕ್ಕಿಯ ಹೆಸರು "Brain fever bird !!!". ನಾವು ಈಗಿರುವ ಕೈಗಾ ಪರಿಸರದಲ್ಲೂ ಇದು ಮಳೆಗಾಲದಲ್ಲಿ ಸಾಕಷ್ಟು ಕೂಗು ಕೇಳಿ ಬಂದರೂ ಕಾಣಸಿಗುವುದು ಅಪರೂಪವೇ. ಕೆಲವೇ ದಿನದ ಹಿಂದೆ ನನ್ನ ಕ್ಯಾಮರಾದಲ್ಲೂ ಸೆರೆಯಾಗಿದೆ!!. ಇದಕ್ಕೆ ಈ ಹೆಸರು ಬಂದಿರುವುದು ಅದರ ಕೂಗುವ ಶೈಲಿಗಷ್ಟೇ. ಇದೊಂದು ಕೋಗಿಲೆಯಂತೆ ಬೇರೆಹಕ್ಕಿಗಳ ಗೂಡಲ್ಲಿ ಮೊಟ್ಟೆಯಿಡುವ "ಪರಪುಟ್ಟ".
ಹೀಗೆ ಮಳೆಗಾಲ ಶುರುವಾದಂತೆ ನಮಗೆ ಜೀವಶಾಸ್ತ್ರದ ಪಾಠ. ಸಾಮಾನ್ಯವಾಗಿ ಕಾಣಸಿಗದ ಅನೇಕ ಜೀವಿಗಳು ಮಳೆಗಾಲದಲ್ಲಿ ಪ್ರತ್ಯಕ್ಷವಾಗಿ ನಮಗೆ ಅಚ್ಚರಿಯನ್ನೂ ಕುತೂಹಲವನ್ನೂ ತರುತ್ತಿದ್ದವು. ಮಳೆಗಾಲದ ಮೊದಮೊದಲಿನ ದಿನಗಳಲ್ಲಿ ಕಾಣಸಿಗುವ ಇನ್ನೊಂದು ಅಪರೂಪವೇ ಅಣಬೆ... ನೆಲದ ಒಳಗೇ ಹುಟ್ಟಿಬೆಳೆಯುವ ಕಲ್ಲಣಬೆ ಒಂದು ಜಾತಿಯದಾದರೆ, ನೆಲದ ಮೇಲೆ ಹುಟ್ಟಿ ಕೊಡೆಯಂತೆ ಬೆಳೆಯುವ 'ನಾಯಿಕೊಡೆ' ಗಳು ಇನ್ನೊಂದು ಜಾತಿ.
ಈ ನಾಯಿಕೊಡೆಯಲ್ಲೂ ವಿವಿಧ ಗಾತ್ರ, ವಿವಿಧ ಬಣ್ಣ, ಆಕಾರ. ಕೆಲವು ಕೆಲವೇ ಮಿಲಿಮೀಟರ್ ವ್ಯಾಸದಾದರೆ, ಇನ್ನುಕೆಲವು ೧೫-೨೦ ಸೆ. ಮೀಟರ್ ಗಾತ್ರದವುಗಳು. ಇನ್ನುಕೆಲವು ಮಡಚಿದ ಕೊಡೆಯಂತಿದ್ದು 'ಯಾವತ್ತು ಬಿಡಿಸಿಕೊಳ್ಳುತ್ತವೆ' ಎಂದು ನಮ್ಮನ್ನು ಒಂದಿಷ್ಟು ದಿನ ಕುತೂಹಲದಿಂದ ಕಾಯಿಸಿ ನಂತರ ಹಾಗೆಯೇ ಕೊಳೆತು ಹೋಗುತ್ತಿದ್ದವು. ಇನ್ನುಕೆಲವು ಸತ್ತ ಮರಗಳ ಮೇಲೆ ಬೆಳೆಯವ ಅತೀ ವಿಚಿತ್ರ ಆಕಾರ-ಬಣ್ಣ-ವಿನ್ಯಾಸದ ಅಣಬೆ.!!! ಒಂದೆರಡು ದಿನಗಳಲ್ಲಿ ಅತೀ ವೇಗವಾಗಿ ಬೆಳೆದು ಅದೇ ವೇಗದಲ್ಲಿ ಕೊಳೆತುಹೋಗುವ ಅಣಬೆಗಳೂ ಕುತೂಹಲ ತರುತ್ತಿದ್ದವು.
ಮಳೆಗಾಲ ಶುರುವಾಯಿತೆಂದರೆ ಭೂಮಿಮೇಲಿರುವ ಎಲ್ಲ ಸಸ್ಯ ಸಂಕುಲಗಳಿಗೆ ಚಿಗುರೊಡೆಯುವ ಸಂಭ್ರಮ... ಇನ್ನುಕೆಲವು ಬೀಜ ಮೊಳಕೆಯೊಡೆದು ಗಿಡವಾಗುವ ಪ್ರಕ್ರಿಯೆ... ಬಾಲ್ಯದಲ್ಲಿ ಕೌತುಕವೆನಿಸಿರುವ ಸಸ್ಯಒಂದಿದೆ. ಖಾಲಿ ಬರಡೆಣಿಸಿರುವ ಜಾಗದಿಂದ ಮೇಲೇಳುವ ಈ ಗಿಡ ಒಂದು ಬಳ್ಳಿ.... ಮೊದಲ ಮಳೆಯಾಗುತ್ತಿದ್ದಂತೆ ಭೂಮಿಯನ್ನು ಸೀಳಿ ಚಿಗುರೊಡೆಯುವ ಈ ಬಳ್ಳಿ ಹಚ್ಚ ಹಸಿರಾಗಿ ಉದ್ದನೆ ಬೆಳೆಯುತ್ತಾ ಸಮೀಪದಲ್ಲಿರುವ ಕ್ಷಿಪ್ರವಾಗಿ ಮರಗಳನ್ನು ಆಲಂಗಿಸುತ್ತ ಬೆಳೆಯುತಿತ್ತು. ನಮಗಾಗುವ ಆಶ್ಚರ್ಯವೆಂದರೆ ಸುಮಾರು ೩-೪ ಮೀರಟ್ ಬೆಳೆದರೂ ಈ ಬಳ್ಳಿಯಲ್ಲಿ ಎಲೆಗಳೇ ಇರುತ್ತಿರಲಿಲ್ಲ!!!!...ಸಾಮಾನ್ಯವಾಗಿ ಬೀಜದಿಂದ ಮೊಳೆಕೆಯೊಡೆಯುವ ಗಿಡಗಳು ಇಷ್ಟು ಕ್ಷಿಪ್ರವಾಗಿ ಬೆಳೆಯುವುದಿಲ್ಲ... ಇದರಲ್ಲೇನಿದೆ ಅಸಾಮಾನ್ಯ ಕೌತುಕ?... ಭೂಮಿಯಲ್ಲಿ  ಅಡಿಗಿರುವ ಇವುಗಳ ಗಡ್ಡೆಯೇ ಇದರ ಹಿಂದಿನ ಗುಟ್ಟು....ಇದರಂತೆ ಹಲವಾರು ಗಡ್ಡೆ-ಗೆಣಸುಗಳ ಗಿಡಗಳೂ ಸಹ ವಿಚಿತ್ರ ಅನಿಸುತಿತ್ತು.... ಮಳೆ ಬರುತ್ತಿದಂತೆ ಭೂಮಿಯನ್ನು ಸೀಳಿ ಕೆಲವೇ ದಿನಗಳಲ್ಲಿ ೧-೨ ಚದರ ಮೀಟರ್ ನಷ್ಟು ಜಾಗಕ್ಕೆಲ್ಲ ಚಪ್ಪರ ಹಾಕುತಿತ್ತು....
ಮಳೆಗಾಲದ ಜಡಿಮಳೆಯಲ್ಲಿ ಹೊರಾಂಗಣದ ಆಟಗಳೆಲ್ಲ ನಿಲ್ಲಿಸಬೇಕಾಗುತಿತ್ತು. ಆಗೊಮ್ಮೆ ಈಗೊಮ್ಮೆ ಮಳೆನಿಂತಾಗ ಅಲ್ಪ ಸ್ವಲ್ಪ ಆಟ ... ಈಗಿನಂತೆ ಮೊಬೈಲಾಗಲಿ ಟಿವಿಯಾಗಲಿ ಇರುತ್ತಿರಲಿಲ್ಲ. ಹಾಗಂತ ಯಾವತ್ತೂ ನಮಗೆ ಬೇಜಾರಾಗುತ್ತಿರಲಿಲ್ಲ.!! ಕಾರಣ ನಮ್ಮ ಒಳಂಗಾಣದ ಆಟಗಳು.... ಅವಿಭಕ್ತ ಕುಟುಂಬವಾಗಿದ್ದರಿಂದ ಮನೆಯಲ್ಲಿ ನಾವು ಹಲವಾರು ಮಕ್ಕಳಿರುತ್ತಿದ್ದೆವು. ಕಣ್ಣಾಮುಚ್ಚಾಲೆ, ಕಳ್ಳ-ಪೊಲೀಸ್, ಪಗಡೆಯಾಟ, ಚೆನ್ನೆಮಣೆ.. ಹೀಗೆ ಹಲವಾರು ಆಟಗಳು ನಮ್ಮ ಆವಾಗಿನ ಒಳಾಂಗಣದ ಆಟಗಳು. ಕರೆಂಟಿಲ್ಲದ ಮಳೆಗಾಲದ ಕತ್ತಲ ದಿನಗಳಲ್ಲಿ ಅಡಗಿಕೊಳ್ಳಲು ಅಸಂಖ್ಯ ಜಾಗವಿದ್ದು ಕಣ್ಣಾಮುಚ್ಚಾಲೆ ಅತೀ ಸಾಮಾನ್ಯ ಆಟ!!! ಅದಲ್ಲೆಡೆ ನಾವೆಲ್ಲ ಸೇರಿ ನಾಟಕ ಕಂಪೆನಿಯನ್ನೇ ಕಟ್ಟಿಕೊಂಡಿದ್ದೆವು!!! ಪಾಠದಲ್ಲಿ ಬರುವ, ವಾರ್ಷಿಕೋತ್ಸವದಲ್ಲಿ ಅಭ್ಯಸಿಸಿರುವ ಅಥವಾ ರೇಡಿಯೋದಲ್ಲಿ ಪ್ರಸಾರವಾಗಿದ್ದ ನಾಟಕಗಳ ಅಭಿನಯ ಮಾಡುತಿದ್ದೆವು. ಸ್ವಯಂ ನಿರ್ದೇಶಿಸಿ ಅಭಿನಯಿಸಿರುವ ಈ ನಾಟಕಗಳಿಗೆ ಹೆಚ್ಚಾಗಿ ಪ್ರೇಕ್ಷಕರು ನಾವೇ!!!. "ಹುಲಿ ಮತ್ತು ಬ್ರಾಹ್ಮಣ" "ಶಿಭಿಚಕ್ರವರ್ತಿ ಮತ್ತು ಬೇಡ" ಇವುಗಳು ಪ್ರಸಿದ್ಧ ನಾಟಕಗಳು. ಆಗಸ್ಟ್ ತಿಂಗಳು  ಬಂತೆಂದರೆ ಸ್ವಾತಂತ್ರ್ಯ ದಿನಾಚರಣೆಯ ತಯಾರಿ. ಶಾಲೆಯಲ್ಲಿ ಅಭ್ಯಸಿಸಿರುವ ದೇಶಭಕ್ತಿ ಗೀತೆಗಳ ಸಮೂಹಗಾನವೂ ನಡೆಯುತಿತ್ತು. " ಭಾರತೀಯರು...ನಾವು ಭಾರತೀಯರು.| ಭರತ ಮಾತೇ ನಮ್ಮ ಮಾತೇ ಭಾರತೀಯರು |" ನಮ್ಮ ಶಕ್ತಿ ಮೀರಿ ಕೂಗುತಿದ್ದರೂ ಮನೆಯಲ್ಲಿ ಯಾರೂ ಬೈಯುತಿರಲಿಲ್ಲ. ಕಾರಣ ಹೊರಗಿನ ಮಳೆಯ ಆರ್ಭಟ... ಧೋ ಎಂದು ಸುರಿಯುವ ಮಳೆಯಲ್ಲಿ ನಾವು ಕೋಗಿದ್ದು ನಮಗೇ ಕೇಳದ ಪರಿಸ್ಥಿತಿ...
ಇನ್ನು ಮನೆಯ ಮುಂದೆ ಹರಿಯುತಿದ್ದ ಸಣ್ಣದೊಂದು ತೋಡು (ಮಳೆಗಾಲದಲ್ಲಿ ಹರಿಯುವ ಸಣ್ಣ ಕಾಲುವೆ...) ನಮ್ಮ ಹಲವಾರು ವಿಸ್ಮಯಗಳ ಭಂಡಾರ, ಕ್ರಿಯಾಶೀಲತೆಯ ಆಗರ!!! ಅಲ್ಲಿ ಮೊಟ್ಟೆಯಿಟ್ಟು ಮರಿಮಾಡುವ ಕಪ್ಪೆಗಳ ಜೀವನಚಕ್ರವನ್ನು ಅತ್ಯಂತ ಕೂಲಂಕುಷವಾಗಿ ವೀಕ್ಷಿಸುತಿದ್ದೆವು. ಕೊಳೆಯುತ್ತಿರುವ ಎಲೆಗಳ ನಡುವೆ ನೊರೆಯಂತಿರುವ ಮೊಟ್ಟೆ ರಾಶಿ... ಕೆಲವೇ ದಿನಗಳಲ್ಲಿ ಹೊರಬರುತ್ತಿದ್ದ ಚಿಕ್ಕದಾದ ಮೀನಿನಂತೆ ಬಲವಿರುವ ಗೊದ ಮೊಟ್ಟೆ ಮರಿ ಕಪ್ಪೆಗಳು.. ಕೆಲವೇ ದಿನಗಳಲ್ಲಿ ಬಾಲಕಳಚಿಕೊಂಡು ಕಪ್ಪೆಯರೂಪ ಪಡೆಯುವುದು.... ಪಾಠದಲ್ಲಿ ಬರುವ ಕಪ್ಪೆಯ ಜೀವನ ಕ್ರಮದ ಪ್ರತ್ಯಕ್ಷ ಉದಾಹರಣೆಗಳಾಗಿದ್ದವು. ಹಾಗೆ ಕೆಲವೊಮ್ಮೆ ಕಪ್ಪೆಯನ್ನು ಹಿಡಿಯಲು ಬರುತ್ತಿದ್ದ ನೀರುಹಾವುಗಳು  ಭಯವನ್ನು ತರುತಿದ್ದರೂ ನೀರಾಟವನ್ನು ಮಾತ್ರ ನಿಲ್ಲಿಸಿರುತ್ತಿರಲಿಲ್ಲ. ...!! ಆ ಸಣ್ಣ  ಕಾಲುವೆಯಲ್ಲಿದೋಣಿಯಾಟ ಇನ್ನೊಂದು ವಿನೋದ... ಕೆಸುವಿನ ಎಳೆಯ ಮೇಲೆ ಸಣ್ಣ ಕಲ್ಲನ್ನಿಟ್ಟು  ನಾವಿಕನನ್ನಾಗಿ ಮಾಡಿ ತೋರಿಬಿಡುತಿದ್ದೆವು. ಹಾಗೆ ಬಿಟ್ಟ ನಾವೆ ನೀರಿನ ಹರಿವಿನ ಕಡೆಗೇ ಸಂಚರಿಸಿ ಕೊನೆಯಲ್ಲಿ ಜಲಪಾತದಲ್ಲಿ ಬಿದ್ದು ನಮ್ಮ ಆಟ  ಮುಕ್ತಾಯವಾಗುತಿತ್ತು. ಆ ಕಾಲುವೆಗೊಂದು ಅಣೆಕಟ್ಟನ್ನು ಕಟ್ಟುವುದು...ಅದರ ನೀರನ್ನು ಸ್ವಲ್ಪ ಎತ್ತರದ ಜಾಗಕ್ಕೆ ಹರಿಸಿ, ಅಲ್ಲಿ ನಾಟಿಮಾಡುವುದು... ಇತ್ಯಾದಿ ಕ್ರಿಯಾಶೀಲತೆಯ ಆಟಗಳು ಮಳೆನಿಂತು ಇನ್ನೊಂದು ಮಳೆಬರುವ ಮುಂಚೆ ನಡೆಯುತ್ತಿದ್ದವು.
ಮಳೆಗಾಲದ ಅಡುಗೆಗಳಲ್ಲಿ ಅತೀ ಅಪರೂಪವಾದ ರುಚಿಕರವಾದ "ಹುರುಳಿ ಸಾರು" ಮರೆಯಲಾಗದ ನೆನಪು. ಹುರುಳಿಸಾರು ಈವಾಗಲೂ ಮಾಡುತ್ತಿವೆ. ಆದರೆ ಆವಾಗ ೨-೩ ಕಿಲೋ ಹುರುಳಿ ಬೇಯಿಸಿ ರಸವನ್ನು ತೆಗೆಯುತಿದ್ದರಿಂದ ಅದರ ರುಚಿ ಅತೀ ಅದ್ಭುತವಾಗಿತ್ತು. ಜಡಿಮಳೆಯಲ್ಲಿ ದೇಹವನ್ನು ಬೆಚ್ಚಗಿರಿಸಲು ಹುರುಳಿಸಾರು ಅವಶ್ಯಕವೂ ಆಗಿತ್ತು. ಬೇಯಿಸಿದ ಹುರುಳಿಯನ್ನು ದನ-ಕೋಣಗಳಿಗೆ ಹಾಕಲಾಗುತಿತ್ತಾದರೂ ವರ್ಷದಲ್ಲಿ ಒಂದೆರಡು ಭಾರಿ ಹುರುಳಿಕಾರಿನ್ನು ತೆಂಗಿನ ತೂರಿ-ಬೆಲ್ಲ ಹಾಕಿ  ಕೊಟ್ಟು ಉಸುಲಿಯನ್ನು ಮಾಡಲಾಗುತಿತ್ತು... ವಾಹ್... ಉಉಮ್ಮಾ ಎಂತಾ ರುಚಿ... ನೆನಪಿಸಿಕೊಂಡರೆ ಈಗಲೂ ಬಾಯಲ್ಲಿ ನೀರುಬರುತ್ತದೆ. ಈವಾಗಿನಂತೆ ಮನೆಯಲ್ಲಿ ಚಾಕಲೇಟ್-ಬಿಸ್ಕೆಟ್ ಇಟ್ಟುಕೊಂಡು ನೆನಪಾದಾಗಲೆಲ್ಲ ತಿನ್ನುವ ಕಾಲವಲ್ಲ!!.. ಚಾಕಲೇಟ್-ಬಿಸ್ಕೆಟ್ ಸಿಗುವುದೇ ಅತೀ ಅಪರೂಪ... 
ಜುಲೈ ತಿಂಗಳಲ್ಲಿ ಬರುವ ಪ್ರಥಮನ ಏಕಾದಶಿಯೂ ಮರೆಯಲಾಗದ ನೆನಪು. ಮನೆಯ ದೊಡ್ಡವರೆಲ್ಲ ಮಧ್ಯಾಹ್ನ ಮಾತ್ರ ಊಟ ಮಾಡುತಿದ್ದರು. ಬೆಳ್ಳಿಗ್ಗೆ ೧-೨ ಹಲಸಿನ ಹಪ್ಪಳ, ಒಂದು ಲೋಟ ಕಷಾಯವಾದರೆ ರಾತ್ರಿಗೆ ಹೆಸರುಬೇಳೆ ಪಾಯಸ... ನಾವು ಮಾಮೂಲಿನಂತೆ ಊಟ ಮಾಡುವುದಲ್ಲದೆ ಹಪ್ಪಳ-ಪಾಯಸ ಎಲ್ಲಾ ತಿಂದು "ಸುಬ್ಬಮ್ಮನ ಉಪವಾಸ" ಮಾಡುತ್ತಿದ್ದೆವು. ರಾತ್ರಿ ಅಪ್ಪ ಮತ್ತು ದೊಡ್ಡಪ್ಪ ಸೇರಿ ಪವಮಾನ ಪಾರಾಯಣ ಮಾಡುತಿದ್ದರು. "ಸ್ವಾದಿಷ್ಠಯಾ ಮದಿಷ್ಠಯಾ ಪವಸ್ವ ಸೋಮ ಧಾರಯಾ। ಇಂದ್ರಾಯ ಪಾತವೇ ಸುತಃ।। .......  " ಮೂರೂ ಜನರ ಒಂದೇ ಧಾಟಿಯಲ್ಲಿ ಮೂಡಿಬರುತ್ತಿದ್ದ ಆ ವೇದ ಮಂತ್ರ ನಮ್ಮನ್ನು ರೋಮಾಂಚನಗೊಳಿಸುತಿತ್ತು.
ಮಳೆಗಾಲದ ಕಹಿ ನೆನಪವೊಂದಿದೆ... ಅದು ಕರ್ಕಾಟಕ ಅಮಾವಾಸ್ಯೆಯಂದು ಮಾಡಲಾಗುತ್ತಿದ್ದ ಹಾಲೆ ಮರದ ಕೆತ್ತೆಯ ಕಷಾಯ.. ಕಹಿ-ಕಹಿ ವಿಷದಂತಿರುವ ಕಷಾಯವನ್ನು ಬೆಳ್ಳಿಗ್ಗೆ ಹಲ್ಲುಜ್ಜಿದಾಕ್ಷಣ ಕುಡಿಯಬೇಕಾಗಿತ್ತು....ಕುಡಿದ ಅರ್ಧ ಗಂಟೆಯಷ್ಟು ಹೊತ್ತು ಬಾಯೆಲ್ಲ ಕಹಿಯಾಗಿರುತಿತ್ತು.  ಕರ್ಕಾಟಕ ಅಮಾವಾಸ್ಯೆಯಂದು ಹಾಲೆ ಮರದ (Alstonia scholaris) ತೊಗಟೆಯನ್ನು ಬೆಳ್ಳಂಬೆಳ್ಳಿಗ್ಗೆ ತಂದು ಅರೆದು ಮೊಸರು ಹಾಕಿ ಕಷಾಯ ಮಾಡಿ ಕುಡಿಯುವುದು ಕರಾವಳಿ ಕರ್ನಾಟಕದ ಸಂಪ್ರದಾಯ. ಪೂರಾ ಒಂದು ವರ್ಷದ ಎಲ್ಲ ಕಾಯಿಲೆಗಳು ದೂರವಾಗುತ್ತವೆ ಎಂಬ ನಂಬಿಕೆ... ಆಯುರ್ವೇದದಲ್ಲೂ ಹೋಮಿಯೋಪಥಿ ಔಷಧ ಪದ್ಧತಿಯಲ್ಲೂ ಇದರ ಪ್ರಯೋಗವಾಗಿದೆಯಂತೆ.... ಈವಾಗಲೂ ನಮ್ಮ ಮನೆಯಲ್ಲಿ ಹಾಲೆ ಕೆತ್ತೆಯ ಕಷಾಯ ಮಾಡಿ ಕುಡಿಯುತ್ತಾರೆ. ನಾವಿರುವ ಕೈಗಾ ಪರಿಸರದಲ್ಲೂ ಈ ಮರಗಳು ಇದ್ದರೂ ಅದರ ಸರಿಯಾದ ಪರಿಚಯು ಇಲ್ಲದ ಕಾರಣ ನಾವು ಉಪಯೋಗಿಸುತ್ತಿಲ್ಲ.

ಮಳೆಗಾಲದ ನೆನಪುಗಳು ಯಾವಾಗಲೂ ಹಸಿ-ಹಸಿ, ಅಂದರೆ ತಾಜಾ... ಮಳೆಗಾಲದಲ್ಲಿ ಎಷ್ಟು ಒಣಗಸಿದರೂ ಒಣಗದ ಒಳಉಡುಪಿನ ಹಾಗೆ. 

Friday, 8 July 2016

ಒಂದು ಗೂಡಿನ ಕಥೆ...

ಸುಮಾರು ಎರಡು ವರ್ಷಗಳ ಹಿಂದೆ ಅಡುಗೆ ಮನೆಯ ಬಾಲ್ಕನಿಯಲ್ಲಿ ರಟ್ಟಿನ ಪೆಟ್ಟಿಗೆಯನ್ನು“ಗೂಡು ಪೆಟ್ಟಿಗೆ” (nest box) ಯಾಗಿ ಜೋಡಿಸಿದ್ದೆವು. ವಿರಳವಾಗಿ ಕಾಣಿಸುವ ಗುಬ್ಬಚ್ಚಿಗಳನ್ನು ಗೂಡು ಕಟ್ಟಲು ಆಕರ್ಷಿಸುವ ಉದ್ದೇಶವಾಗಿತ್ತು. ಆದರೆ ಗುಬ್ಬಚ್ಚಿಯ ಬದಲಿಗೆ ಮುನಿಯಾ ಜಾತಿಗೆ ಸೇರಿದ “ಕಪ್ಪು ಗಂಟಲಿನ ಮುನಿಯಾ” ಸಂಸಾರ ಮಾಡಲು ಶುರು ಮಾಡಿದವು. ಒಮ್ಮೆ ವಂಶಾಭಿವೃದ್ಧಿ ಮುಗಿದ ಮೇಲೆ ಮತ್ತೊಮ್ಮೆ,ಅದಾದ ಮೇಲೆ ಮಗದೊಮ್ಮೆ, ಹೀಗೆ ಗೂಡು ಕಟ್ಟಿ ಮರಿ ಮಾಡುತ್ತಿದ್ದವು. ಸುಮಾರು ಎರಡರಿಂದ ಎರಡೂವರೆ ತಿಂಗಳಿಗೊಮ್ಮೆ ಮರಿ ಹಾಕುತ್ತಿದ್ದವು. ಒಂದೇ ಜೋಡಿ ಹಕ್ಕಿಗಳೋ ಅಥವಾ ಬೇರೆ ಜೋಡಿಗಳೋ ಗೊತ್ತಿಲ್ಲ….ಒಮ್ಮೆ ಎರಡು ಜೋಡಿ ಹಕ್ಕಿಗಳು ಗೂಡಿಗಾಗಿ ಕಾದಾಡುತ್ತಿದ್ದವು. ಜಗಳವು ಸುಮಾರು 15 ನಿಮಿಷ ನಡೆದು, ಎರಡನೆಯದಾಗಿ ಬಂದ ಜೋಡಿ ಗೂಡು ಬಿಡುವುದರಲ್ಲಿ ಮುಕ್ತಾಯವಾಯಿತು. ಇದನ್ನು ನೋಡಿ ಇನ್ನೊಂದು“ಗೂಡು ಪೆಟ್ಟಿಗೆ” ಯನ್ನು ಇಟ್ಟರೆ ಹೇಗಾದೀತು ಎಂದುಕೊಂಡೆ. ಬೆಡ್‍ರೂಮಿನ ಬಾಲ್ಕನಿಯಲ್ಲಿ ಇನ್ನೊಂದು ಪೆಟ್ಟಿಗೆಯನ್ನು ಬಾಲ್ಕನಿಯ ಗ್ರಿಲ್‍ಗೆ ಜೋಡಿಸಿದೆ. ಆ ಬಾಲ್ಕನಿಯಲ್ಲಿ ಹಕ್ಕಿಗಳು ಬರುತ್ತಿದ್ದರೂ ಗೂಡು ಕಟ್ಟಿರಲಿಲ್ಲ. ಬಹುಷಃ ಕಡಿಮೆ ಎತ್ತರದಲ್ಲಿ ಗ್ರಿಲ್‍ಗೆ ಜೋಡಿಸಿರುವುದರಿಂದ ಅಸುರಕ್ಷಿತ ಅನಿಸಿರಬೇಕು.
ಸುಮಾರು ಒಂದು ತಿಂಗಳ ನಂತರ ಒಮ್ಮೆ ಬೇರೊಂದು ಕಪ್ಪು-ಬಿಳಿ ಬಣ್ಣದ ಹಕ್ಕಿ ಹೊಸದಾಗಿ ಇಟ್ಟ ಪೆಟ್ಟಿಗೆಗೆ ಹೋಗಿ ಬರುವುದು ಕಾಣಿಸಿತು…“ಗೂಡು ಪೆಟ್ಟಿಗೆ” ಗೂಡುಕಟ್ಟಲು ಸೂಕ್ತವಾದ ಜಾಗವೆಂದು ತಿಳಿದ ಆ ಹಕ್ಕಿ, ಗೂಡು ಕಟ್ಟಲು ಶುರು ಮಾಡಿತು. ಅದರ ಫೋಟೋ ತೆಗೆದು ಅಂತರ್ಜಾಲದಲ್ಲಿ ಹುಡುಕಿದಾಗ ಅದು“ಒರಿಯಂಟಲ್ ಮ್ಯಾಗ್‍ಪೈ ರಾಬಿನ್” (Oriental Magpie Robin) ಅಂತ ತಿಳಿಯಿತು. ಕನ್ನಡದಲ್ಲೇನು ಹೆಸರು ಎಂದು ತಿಳಿಯಲಿಲ್ಲ… ಈ ರಾಬಿನ್ ಹಕ್ಕಿಯ ಗೂಡು ಮುನಿಯಾದ ಗೂಡಿನಂತಿರದೆ ತಟ್ಟೆ ಅಥವಾ ಬುಟ್ಟಿಯಾಕಾರದಲ್ಲಿತ್ತು. ಮೊದ ಮೊದಲು ಪಾಚಿಯಂತಹ ಜೌಗು ಪ್ರದೇಶದಲ್ಲಿ ಬೆಳೆಯುವ ಪ್ರಾಥಮಿಕ ಸಸ್ಯ (Premitive plant) ಗಳನ್ನು ತರುತಿತ್ತು. ನಂತರ ತೆಳ್ಳಗಿನ ಕಡ್ಡಿಗಳನ್ನು, ಹೆಚ್ಚಾಗಿ ಕೂಡು ಎಲೆಗಳ (compound leaf) ದಂಟನ್ನು ತರುತಿತ್ತು. ಪಾಚಿಯಂತಹ ಸಸ್ಯಗಳ ಉಪಯೋಗವೇನು? ತಿಳಿಯಲಿಲ್ಲ…ಸಂಜೆಯ ಸಮಯದಲ್ಲಿ ರಾಗವಾಗಿ ಕೂಗುತಿತ್ತು…ಸಾಮಾನ್ಯವಾಗಿ ಕೂಗು ಸಂಕ್ಷಿಪ್ತವಾಗಿದ್ದರೆ ಸಂಜೆಯ ಹೊತ್ತಲ್ಲಿ ಉದ್ದನೆಯ ರಾಗವಾಗಿತ್ತು. ಹೆಣ್ಣು ಹಕ್ಕಿಯೊಂದೇ ಗೂಡು ಕಟ್ಟುತಿತ್ತು…ಗಂಡು ಹಕ್ಕಿ ಆಗಾಗ್ಯೆ ಬಂದು ಹೋಗುತಿತ್ತು…ಅದಕ್ಕೆ ಗೂಡಿನ ರಕ್ಷಣೆಯ ಹೊಣೆ.!! ದೂರದಲ್ಲಿದ್ದು ಅಪಾಯದ ಸೂಚನೆಯನ್ನು ಕೂಗಿ ಹೇಳತಿತ್ತು… ಆದರೂ ಗಂಡು ಹಕ್ಕಿ ಬರೀ ಹೆದರುಪುಕ್ಕಲ…ಬೆಡ್‍ರೂಮಲ್ಲಿ ಕಾಣಿಸಿದರೂ‘ಪುರ್ರ್‍ರ್ರ್’ ಎಂದು ಹಾರಿ ಹೋಗುತಿತ್ತು. ಹೆಣ್ಣು ರಾಬಿನ್ ಮಾತ್ರ ತುಂಬಾ ಧೈರ್ಯವಂತೆ!!…ಬಾಲ್ಕನಿಗೆ ಹೋದರೂ ಹಾರುತ್ತಿರಲಿಲ್ಲ!!…ಏನಾದರೂ ಅಪಾಯದ ನೂಚನೆ ಇದ್ದರೆ ಮಾತ್ರ ಹಾರುತಿತ್ತು..! ದಿನ ಕಳೆದಂತೆ ಇನ್ನೂ ಸಲಿಗೆಯಾಯಿತು. ಎಷ್ಟೆಂದರೆ ಒಮ್ಮೆಯಂತೂ ನಾನು ಅರ್ಧ ಅಡಿ ಹತ್ತಿರದಿಂದ ಫೋಟೋ ಕ್ಲಿಕ್ಕಿಸಿದ್ದೆ. 10-12 ದಿನಗಳಲ್ಲಿ ಗೂಡು ರೆಡಿಯಾಯಿತು…ಹೆಣ್ಣು ಹಕ್ಕಿ ರಾತ್ರಿ ಕೂತು ಮೊಟ್ಟೆಯಿಡಲು ಶುರುಮಾಡಿತು…ದಿನಕ್ಕೊಂದಂತೆ 4ಮೊಟ್ಟೆಗಳನ್ನಿಟ್ಟಿತು. ತಿಳಿ ನೀಲಿ ಬಣ್ಣದ, ಕಂದು ಚುಕ್ಕೆಯಿರುವ, ಸುಮಾರು 15-20 ಮಿಮಿ ದೊಡ್ಡದಾದ, ಸರಿ ಸುಮಾರಿಗೆ ದುಂಡಗಿನ ಮೊಟ್ಟೆಗಳು ಬುಟ್ಟಿಯಾಕಾರದ ಗೂಡಿನ ಮಧ್ಯದಲ್ಲಿದವು…ಶ್ರೀಮತಿ ರಾಬಿನ್‍ಗೆ 24ಗಂಟೆಯೂ ಕಾವು ಕೊಡುವ ಕೆಲಸ…!! ಮಧ್ಯೆ ಒಮ್ಮೊಮ್ಮೆ ಹೋಗಿ ಆಹಾರ ತಿಂದು ಬರುತಿತ್ತು…ಒಂದು ಬಾಳೆಹಣ್ಣಿನ ತುಂಡನ್ನು ನೋಡೋಣವೆಂದು ಗ್ರಿಲ್ ಮೇಲೆ ಇಟ್ಟೆನು… ಹಕ್ಕಿ ಬಾಳೆಹಣ್ಣನ್ನೂ ತಿಂದಿತು… ಹಸಿವಾಗಿರಬೇಕಲ್ಲವೇ?ಸಾಮಾನ್ಯವಾಗಿ ಹುಳ-ಕೀಟಗಳನ್ನು ತಿನ್ನುವ ರಾಬಿನ್ ಆಗೊಮ್ಮೆ-ಈಗೊಮ್ಮೆ ಸಣ್ಣ ಹಣ್ಣುಗಳನ್ನೂ ತಿನ್ನುವುದಿದೆಯಂತೆ…
ಈ ಮಧ್ಯೆ ಮೊದಲನೇ ಬಾಲ್ಕನಿಯ ಮುನಿಯಾ ಗೂಡಿಗೆ ಬೇರೋಂದು ಜೋಡಿಯಿಂದ ಪೈಪೋಟಿ ಶುರವಾಯಿತು. ಅದಕ್ಕಂತೇ ಇನ್ನೊಂದು ರಟ್ಟಿನ ಪೆಟ್ಟಿಗೆಯನ್ನು ಅಡುಗೆ ಮನೆ ಬಾಲ್ಕನಿಯ ಮುನಿಯಾ ಗೂಡಿನ ಮೇಲೆ ಜೋಡಿಸಿದೆನು. 4-5ದಿನ ಕಾವು ಕೊಟ್ಟ ರಾಬಿನ್, ಒಮ್ಮಿಂದೊಮ್ಮೆ ಕಾಣೆಯಾಯಿತು. ಗೂಡನ್ನು ಇಣುಕಿ ನೋಡಿದರೆ ಮೊಟ್ಟೆ ಹಾಗೆಯೇ ಇದ್ದವು…ಏನಾಯಿತಪ್ಪಾ!?ಯಾಕೆ ಬಿಟ್ಟು ಹೋಯಿತು…!? ಮಾರನೇ ದಿನ ರಾಬಿನ್ ಜೋಡಿಗಳು ಮುನಿಯಾ ಗೂಡಿನ ಮೇಲಿನ“ಗೂಡು ಪೆಟ್ಟಿಗೆ”ಯನ್ನು ಆಕ್ರಮಿಸಿತು…ಗೂಡು ಕಟ್ಟಲೂ ಶುರು ಮಾಡಿತು.!!..ಮುನಿಯಾ ಕೆಳಗಿನ ಮಹಡಿ…!! ರಾಬಿನ್ ಮೇಲಿನ ಮಹಡಿ!…ಸಹಬಾಳ್ವೆಯನ್ನು ನೋಡಲು ನಮಗೆ ಕತೂಹಲ…ಆಶ್ಚರ್ಯ!…ಸಂತೋಷ ಕೂಡ…!! ಮುನಿಯಾ ಆವಾಗಲೇ ಮೊಟ್ಟೆಯಿಟ್ಟಾಗಿತ್ತು. ರಾಬಿನ್ ದಂಪತಿಗಳಿಗೆ ಗೂಡುಕಟ್ಟುವ ತರಾತುರಿ!!!…ಶಾಂತತೆ ಬೇಕಾಗಿದ್ದ ಮುನಿಯಕ್ಕೆ ಮೇಲ್ಮಹಡಿಯಲ್ಲಿ ಯಾವಾಗಲೂ ಗಲಾಟೆ,,ಶಬ್ದ. ಹೊಸತಾಗಿ ಕಟ್ಟಿದ ಅಪಾರ್ಟಮೆಂಟಲ್ಲಿ ವಾಸಿಸಲು ಶುರು ಮಾಡಿದಾಗ ನಮಗಾದ ಅನುಭವವೂ ಇದೇ. ಮೇಲಿನ ಮಹಡಿಗಳಲ್ಲಿ ಕೆಲಸ ಮುಗಿಯದ ಕಾರಣ ನಿತ್ಯವೂ ಶಬ್ದ..ಗಲಾಟೆ. ರಾತ್ರಿ ಪಾಳಿ ಮಾಡಿ ಮಲಗಿದಾಗ ನಿತ್ಯವೂ ನಿದ್ರಾಭಂಗವಾಗುತಿತ್ತು. ಇಲ್ಲಿ ಮುನಿಯಾ ಅಡಚಣೆಗಳನ್ನು ಸಹಿಸಿ ವಾಸಿಸಿರುವುದು ನೋಡಿ ಖುಶಿಯಾಗುತಿತ್ತು. 4-5ದಿನಗಳ ನಂತರ ಮುನಿಯಾಗಳು ರಾಬಿನ್ ಹಕ್ಕಿಯ ಗೌಜಿಗೆ ಹೆದರಿ ಓಡಿಯೇ ಹೊದವು!..ಪಾಪ ಮುನಿಯಾ…ಒಂದು ಇನ್ನೊಂದರ ವೈರಿಯಲ್ಲದಿದ್ದರೂ ಅತೀ ಸನಿಹದ ವಾಸ ದುಸ್ತರವೆನಿಸಿರಬೇಕು. ಪ್ರಕೃತಿ ನಿಯಮ…ನಾವೇನು ಮಾಡುವುದು?…ರಾಬಿನ್ ಸಂಸಾರವಾದರೂ ನೆಮ್ಮದಿಯಿಂದಿರಲಿ ಎಂದು ಆಶಿಸಿದೆವು. 10-12ದಿನಗಳಲ್ಲಿ ಗೂಡು ರೆಡಿ!!….
DSC03126
ಬೆಡ್‍ರೂಮ್ ಬಾಲ್ಕನಿಯಲ್ಲಿ ಅರ್ಧಕ್ಕೇ ಬಿಟ್ಟು ಹೋದ ಗೂಡನ್ನು ಒಂದು ವಾರದ ನಂತರ ತೆಗೆದು ನೋಡಿದೆವು. ಗೂಡು ತುಂಬಾ ಇರುವೆಗಳು.!!..ನಾಲ್ಕು ಮೊಟ್ಟೆಗಳಲ್ಲಿ ಒಂದನ್ನು ಇರುವೆಗಳು ಸಂಪೂರ್ಣ ಖಾಲಿ ಮಾಡಿದ್ದವು!! ಬೇರೆ ಮೊಟ್ಟೆಗಳನ್ನು ಮುತ್ತಿಕೊಂಡು ತಿನ್ನುತ್ತಿದ್ದವು…ಪೆಟ್ಟಿಗೆ ಬಿಚ್ಚಿ ಗೂಡು ಕಟ್ಟಿದ ವೈಖರಿಯನ್ನು ನೋಡಿದರೆ ಆಶರ್ಯವಾಯಿತು!! ಪಾಚಿ ಮುಂತಾದ ಜೌಗು ಪ್ರದೇಶದ ಸಸ್ಯಗಳನ್ನು ಪೆಟ್ಟಿಗೆಯ ಮೂಲೆ-ಮೂಲೆಯಲ್ಲಿ ಇಟ್ಟಿತ್ತು…ಹಕ್ಕಿಗಳ ವಿಸರ್ಜನೆಯಿಂದಲೋ ಏನೋ, ಪಾಚಿ ಪೆಟ್ಟಿಗೆಗೆ ಗಟ್ಟಿಯಾಗಿ ಅಂಟಿಕೊಂಡಿತ್ತು!!. ಮಳೆಗಾಲದಲ್ಲಿ ಗೂಡನ್ನು ನೀರಿನಿಂದ ಸುರಕ್ಷಿತವಾಗಿಡುವ ವಿನ್ಯಾಸವಿರಬೇಕು!! ಚಿಕ್ಕ ಕಡ್ಡಿಗಳನ್ನು ಸುತ್ತಲೂ ಜೋಡಿಸಿ ಮಧ್ಯ ಗುಂಡಿಯಾಗಿರುವ ಗೂಡನ್ನು ರಚಿಸಿತ್ತು…ನೋಡಲು ಅಷ್ಟೇನೂ ಸುಂದರವಾಗಿಲ್ಲದಿದ್ದರೂ ಮರಿಗಳ ಬೆಳವಣಿಗೆಗೆ ಸೂಕ್ತವಾಗಿ ಸುರಕ್ಷಿತವಾಗಿತ್ತು…
IMG_8173red
DSC04186_-_Copy
ಹದಿನೈದು ದಿನಗಳ ರಜೆಯಿಂದ ವಾಪಾಸು ಬಂದಾಗ ರಾಬಿನ್ ಮರಿಯಾಗಿದ್ದವು!! ರಾಬಿನ್ ದಂಪತಿಗಳು ಮರಿಗಳ ಹೊಟ್ಟೆಯನ್ನು ತುಂಬಿಸಲು ಸಂಪೂರ್ಣ ಪ್ರಯತ್ನ ಮಾಡುತ್ತಿದ್ದವು…! ಗೂಡುನ್ನು ಹೆಣ್ಣು ಹಕ್ಕಿ ಮಾತ್ರ ಕಟ್ಟಿದ್ದರೂ, ಮರಿಗಳನ್ನು ಸಾಕುವ ಜವಾಬ್ದಾರಿ ಎರಡೂ ಹಕ್ಕಿಗಳು ಸೇರಿ ನಿಭಾಯಿಸುತ್ತಿದ್ದವು.!.. ಪ್ರತೀ 5-10 ನಿಮಿಷಕ್ಕೊಮ್ಮೆ ಎರಡೂ ಹಕ್ಕಿಗಳು ಹುಳ-ಹುಪ್ಪಟೆ, ಕೀಟ, ಹಾತೆ ಇತ್ಯಾದಿ ಆಹಾರ ಸಾಮಗ್ರಿಗಳನ್ನು ತಂದು ಮರಿಗಳ ಬಾಯಿಗೆ ತುರುಕುತ್ತಿದ್ದವು. ಗಂಡು ಹಕ್ಕಿ ಸಾಮಾನ್ಯವಾಗಿ ಕಂಬಳಿ ಹುಳ (caterpillar)ಗಳನ್ನು ಹೆಚ್ಚಾಗಿ ತರುತ್ತಿದ್ದರೆ, ಹೆಣ್ಣು ಹಕ್ಕಿ ನೊಣ,ಜೇಡ, ಹಾತೆಗಳನ್ನು ಹೆಚ್ಚಾಗಿ ಹಿಡಿದು ತರುತ್ತಿತ್ತು…ಇಷ್ಟು ಹುಳಗಳನ್ನು ಅಲ್ಪ ಸಮಯದಲ್ಲಿ ತರುವುದು ಆಶ್ಚರ್ಯವಲ್ಲವೇ?!! ಬೀಜ ಕಾಳುಗಳನ್ನು ತಿನ್ನುವ ಹಕ್ಕಿಗಳಾದರೂ ಬೆಳೆದ ಗದ್ದೆಯನ್ನೊ, ಶೇಖರಿಸಿದ ಜಾಗವನ್ನು ಗುರುತಿಸಿ ತರಬಹುದು…ಇಲ್ಲಿ ಜೀವಂತ ಕೀಟಗಳನ್ನು ಹುಡುಕಿ,ಹಿಡಿದು ತರಬೇಕು…ನಮಗೆ ಕಷ್ಟಕರವೆನಿಸಿದರೂ ಈ ಹಕ್ಕಿಗಳಿಗೆ ಇದು ಕರತಲಾಮಲಕ….ದಿನವೊಂದಕ್ಕೆ ನೂರಾರು ಹುಳ/ಕೀಟಗಳನ್ನು ಹಿಡಿಯುವ ಈ ಹಕ್ಕಿಗಳು, ಕೃಷಿಕರಿಗೆ ಮಾಡುವ ಉಪಕಾರ ಅಷ್ಟಿಟ್ಟಲ್ಲ….ಜೋಡಿ ಹಕ್ಕಿಗಳ ಶ್ರಮ ಅತೀವವಾಗಿದ್ದರೂ ಅವುಗಳಗೆ ಅದೇ ಖುಷಿ,ಸಂಭ್ರಮ!! ಆಹಾರ ತರುವಾಗಲೂ ಹೆದರುಪುಕ್ಕಲು ಗಂಡು ಹಕ್ಕಿ ಅಡುಗೆ ಮನೆಗೆ ಹೋದರೆ ಸಾಕು,ಪುರ್ರ್‍ರ್ರ್ ಎಂದು ಹಾರಿ ಹೋಗುತಿತ್ತು. ಮರಿಗಳು ದೊಡ್ಡದಾದಂತೆ ಅವುಗಳ ಕೂಗೂ ಸಹ ಜಾಸ್ತಿಯಾಗತೊಡಗಿತು. ಅಪ್ಪ-ಅಮ್ಮ ಬರುವಾಗ ಕಾದು ಕೂತು ಕೂಗಿ-ಕೂಗಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದವು. “ಅಳುವ ಮಗುವಿಗೆ ಅಧಿಕ ಹಾಲು” ಎನ್ನುವಂತೆ ಈ ಮರಿಗಳಿಗೆ ಕೂಗೇ ಹೊಟ್ಟೆ ತುಂಬಿಸಿಕೊಳ್ಳವ ಸಾಧನ! 10-12 ದಿನಗಳ ಕಳೆದ ಮೇಲೆ ಗೂಡಿನಲ್ಲಿ ರೆಕ್ಕೆ ಬಡಿಯುವ ಶಬ್ದ ಕೇಳಿಸುತಿತ್ತು. ಗೂಡಿನ ಬಾಗಿಲಿಗೆ ಬಂದು ಪೋಷಕರಿಗಾಗಿ ಕಾಯುತ್ತಿದ್ದವು.
ಅದೊಂದು ದಿನ ಹೀಗೆ ಮರಿ ಹಕ್ಕಿಗಳು ಕೂತಿರುವಾಗ ಅಕಸ್ಮಾತ್ ಆಗಿ ಬಾಲ್ಕನಿ ಬಾಗಿಲು ತೆರೆದು ಬಿಟ್ಟೆ.. ಒಂದು ಮರಿ ಗಾಬರಿಗೊಂಡು ಹಾರಿ ಹೊರಗೆ ಬಂದಿತು. ಸರಿಯಾಗಿ ಹಾರಲಾಗದ ಮರಿಯು ಗಾಬರಿಯಿಂದ ಒಮ್ಮೆ ಬಾಲ್ಕನಿಯ ಗ್ರಿಲ್ ಮೇಲೆ, ಮತ್ತೊಮ್ಮೆ ಕಿಟಕಿಯ ಮೇಲೆ ಕೂರುತ್ತಾ ಚಡಪಡಿಸುತಿತ್ತು…ಈ ಮರಿ ಹಕ್ಕಿಯ ಭಯವೊ,ತವಕವೊ, ಹುಚ್ಚು ಧೈರ್ಯವೊ?… ಅಂತೂ ಸಂಕಟಕ್ಕೆ ಸಿಲುಕಿತು. ಸ್ವಲ್ಪದರಲ್ಲೇ ಒಂಟಿ ಮರಿಯ ತೊಳಲಾಟ ಕಂಡ ಇನ್ನೆರಡೂ ಹಕ್ಕಿಗಳು ಹುಚ್ಚು ಧೈರ್ಯ ಮಾಡಿ ಗೂಡಿನಿಂದ ಹೊರ ಬಂದು ಅವುಗಳೂ ಪೇಚಾಡಲು ಶುರು ಮಾಡಿದವು. ಇದನ್ನು ನೋಡಿ ನಮಗೆ ತುಂಬಾ ದುಃಖವಾಯಿತು. ಛೆ! ನಾನೇನು ಮಾಡಿದೆ? ಎಂದು ಪಶ್ಚಾತ್ತಾಪವಾಯಿತು. ನಿಶ್ಚಿಂತೆಯಿಂದಿದ್ದ ಮರಿಗಳನ್ನು ಏಳಿಸಿದೆನಲ್ಲಾ…ಅಷ್ಟೊತ್ತಿಗೆ ತಾಯಿ ಹಕ್ಕಿಯ ಆಗಮನ. ಚೀಕರಿಸುತ್ತಿದ್ದ ಮರಿಗಳ ಪಾಡನ್ನು ನೋಡಿ ಗಾಬರಿಗೊಂಡಿತು. ಒಂದೆರಡು ಬಾರಿ ಗೂಡಿಗೆ ಹಾರಿ ಮರಿಗಳನ್ನು ಗೂಡು ಸೇರಲು ಪ್ರೇರೇಪಿಸಿತು. ಗಾಬರಿ ಮತ್ತು ಯದ್ವಾತದ್ವ ಹಾರಾಟದಿಂದ ಬಳಲಿದ ಮರಿಗಳು ಗೂಡು ಸೇರಲು ಅಶಕ್ತರಾಗಿದ್ದವು. ತಾಯಿ ಹಕ್ಕಿ ಬಾಲ್ಕನಿಯ ಕಿಟಕಿಯ ಮೇಲೆ ಆಹಾರ ಕೊಟ್ಟು ಹಾರಿ ಹೋಯಿತು. ಗಂಡು ಹಕ್ಕಿಯೂ ಬಂದು ಆಹಾರ ಕೊಟ್ಟು ಹೋಯಿತು. ಪೋಷಕ ಹಕ್ಕಿಗಳಿಂದ ಆಹಾರ ತಿಂದ ಮರಿಗಳು ಸ್ವಲ್ಪ ಸುಧಾರಿಸಿದವು. ಸ್ವಲ್ಪ ಧೈರ್ಯವೂ ಬಂದಿರಬೇಕು. ಆದರೆ ಅದು ಅತೀ ಕ್ಷಣಿಕವಾಗಿತ್ತು. ಎಲ್ಲಿತ್ತೊ ಏನೋ, ಕಾಗೆಯೊಂದು ಬಂದ ಬಾಲ್ಕನಿಯಲ್ಲಿ ಪ್ರತ್ಯಕ್ಷವಾಯಿತು. ಎಲ್ಲೋ ಹಾರುತ್ತಿದ್ದ ಕಾಗೆಯ ಕಣ್ಣಿಗೆ ಈ ಅಶಕ್ತ ಮರಿಗಳು ಕಾಣಿಸಿಯೇ ಬಿಟ್ಟವು. “ಬಾಣಲೆಯಿಂದ ತಪ್ಪಿ ಒಲೆಗೇ ಬಿದ್ದಂತಾಯಿತು”. ಕೂಡಲೇ ಕಾಗೆಯನ್ನು ಓಡಿಸಿದೆವು. ಅದೇನು ಪ್ರಕೃತಿ ನಿಯಮ?! ಆಹಾರ ಸರಪಣಿಯ ನಾಲ್ಕನೇ ಕೊಂಡಿಯಾಗಿ ಕಾಗೆ ಪ್ರಕಟವಾಗಿತ್ತು! ಶಾಂತವಾಗಿ ನೆಮ್ಮದಿಯಿಂದ ಗೂಡಲ್ಲಿ ಕೂತಿದ್ದ ಈ ಮರಿಗಳಿಗೆ ನೋಡು-ನೋಡುತ್ತಲೇ ಸಾವು-ಬದುಕಿನ ಹೋರಾಟ!!. ನಮ್ಮಿಬ್ಬರಿಗೂ ಸಹ ಗಾಬರಿ-ದುಃಖ. ನನಗೆ ಇದೆಲ್ಲಾ ನನ್ನಿಂದಲೇ ಆಯಿತಲ್ಲಾ ಎಂಬ ಪಶ್ಚಾತ್ತಾಪ. ಛೆ! ಈ ರಾಬಿನ್ ದಂಪತಿಗಳಿಗೆ ಸಂತಾನೊತ್ಪತ್ತಿಗೆ ಎಷ್ಟು ಕಂಟಕವಪ್ಪಾ..?! ಮೊದಲ ಗೂಡಲ್ಲಿ ಮರಿಯಾಗುವ ಮೊದಲೇ ಇರುವೆ ಹಾವಳಿ..ಈಗ ಮರಿಗಳನ್ನು ಉಳಿಸಿಕೊಳ್ಳವುದು ಕಷ್ಟಕರವೇ ಸರಿ. ಹೀಗೆ ಪೋಷಕ ಹಕ್ಕಿಗಳು ಆಹಾರ ತಂದು ಕೊಡುತ್ತಿದ್ದವು. ನಮಗೆ ಕಾದು ಕೂತು ಕಾಗೆಗಳನ್ನು ಓಡಿಸುವ ಕೆಲಸ..! ಮರಿಗಳಂತೂ ಕಾಗೆಗೆ ಹೆದರಿಕೊಂಡು ಬಾಲ್ಕನಿಯಲ್ಲಿಟ್ಟ ಹೂಕುಂಡಗಳ ಸಂಧಿನಲ್ಲಿ ಅಡಗಿ ಕುಳಿತ್ತಿದ್ದವು. ಸಂಜೆಯ ಹೊತ್ತಿಗೆ ಸ್ವಲ್ಪ ಸುಧಾರಿಸಿಕೊಂಡು ಆಗೊಮ್ಮೆ ಈಗೊಮ್ಮೆ ಗ್ರಿಲ್ ಮೇಲೆ ಕೂರತ್ತಿದ್ದವು. ಸಂಜೆ 5 ಗಂಟೆಯ ಸುಮಾರಿಗೆ ಮೂರೂ ಮರಿ ಹಕ್ಕಿಗಳನ್ನು ಪೋಷಕ ಹಕ್ಕಿಗಳು ಕಾಡಿಗೆ ಕರೆದ್ಯೊದವು. ಅಧ್ಯಾಯ ಸುಖಾಂತ್ಯವೇ?ನಮಗಂತೂ ಸಮಾಧಾನವಾಯಿತು. ನೂರಕ್ಕೆ ನೂರಲ್ಲದಿದ್ದರೂ ಮರಿಗಳು ಬದುಕುಳಿಯುವ ಸಾಧ್ಯತೆಯೇ ಜಾಸ್ತಿಯನಿಸಿತು…
ಮುನಿಯಾ ಮತ್ತು ರಾಬಿನ್’ಗಳ ಎರಡೂ ಗೂಡನ್ನು ತೆಗೆದು ಸ್ವಚ್ಛಗೊಳಿಸಿ ಮತ್ತೆ ಜೋಡಿಸಿದೆನು. ಸುಮಾರು 20 ದಿನಗಳ ಬಳಿಕ ಪುನಃ ರಾಬಿನ್ ಹಕ್ಕಿಗಳು ಗೂಡು ಕಟ್ಟಲು ಶುರು ಮಾಡಿದವು. ಅಂದರೆ ಹಿಂದಿನ ಕಹಿ ನೆನಪುಗಳಾಗ್ಯೂ ಸಫಲತೆ ತೃಪ್ತಿ ತಂದಿರಬೇಕು. ಕಾಡಿಗೆ ಹೋಲಿಸಿದರೆ ಮನುಷ್ಯರ ಒಡನಾಟದಲ್ಲಿ ಗೂಡು ಕಟ್ಟುವುದು ಸುರಕ್ಷಿತವೆನಿಸಿರಬೇಕು. ಮೊದಲಿನಂತೆಯೇ ಗೂಡು ಕಟ್ಟಿ ಮೊಟ್ಟೆಯಿಟ್ಟು ನಾಲ್ಕು ಮರಿಗಳನ್ನು ಬೆಳೆಸಿದವು. ತದನಂತರ ಕಳೆದ ಒಂದು ವರ್ಷದಲ್ಲಿ ಮುನಿಯಾ ಮಾತ್ರ ಸಂಸಾರ ಮಾಡುತ್ತಿದೆ. ರಾಬಿನ್ ಗೂಡ ಕಟ್ಟಲಿಲ್ಲ.
ಈ ಹಕ್ಕಿಗಳು ಕಾಡಲ್ಲಿ ಗೂಡು ಕಟ್ಟಿ ಮರಿಗಳನ್ನು ಬೆಳೆಸುತ್ತವೆ. ಕಾಡಿನಲ್ಲಿ ಇವುಗಳ ಗೂಡು ಕಟ್ಟುವ ಮತ್ತು ಮರಿ ಮಾಡುವ ವೈಖರಿಯನ್ನು ನೋಡುವುದು ಅಸಾಧ್ಯ. ಅಲ್ಲದೇ ಅದು ಹಕ್ಕಿಗಳಿಗೆ ಅಡಚಣೆಯೇ ಆಗುತ್ತದೆ. ಆದರೆ ಈ ಹಕ್ಕಿಗಳು ನಮ್ಮ ಬಾಲ್ಕನಿಯಲ್ಲಿ ಗೂಡು ಕಟ್ಟಿ, ಗೂಡು ಕಟ್ಟುವ ಕಾರ್ಯವೈಖರಿ, ಮರಿಗಳ ಬಗ್ಗೆ ಕಾಳಜಿ ಮತ್ತು ಮರಿಗಳನ್ನು ಬೆಳೆಸುವ ರೀತಿಯನ್ನು ತಿಳಿಸಿ ಕೊಟ್ಟವು. ಅದಲ್ಲದೇ ನಿತ್ಯವೂ ಮಧುರವಾಗಿ ಹಾಡುತ್ತಾ ನಮ್ಮನ್ನು ಮನರಂಜಿಸುತಿದ್ದವು.

ಒರಿಯಂಟಲ್ ಮ್ಯಾಗ್‍ಪೈ ರಾಬಿನ್ ಸುಮಾರು 19ಸೆ.ಮೀ ಉದ್ದವಿರುವ ಕಪ್ಪು-ಬಿಳಿ ಬಣ್ಣದ ಪಕ್ಷಿ. ಯಾವಾಗಲೂ ಬಾಲವನ್ನು ಮೇಲಕ್ಕೆತ್ತಿರುವುದು ಇದರ ಸ್ವಭಾವ!. ಗಂಡು ಹಕ್ಕಿ ಖಡಕ್ ಕಪ್ಪು ಬಣ್ಣದ್ದಾಗಿದ್ದರೆ, ಹೆಣ್ಣು ಹಕ್ಕಿ ಸ್ವಲ್ಪ ಬೂದು ಮಿಶ್ರಿತ ಬಣ್ಣದ್ದಾಗಿರುತ್ತದೆ. ಭಾರತದಲ್ಲಿ ಮಾರ್ಚನಿಂದ ಜುಲೈವರೆಗೆ ಮರಿ ಮಾಡುವ ಈ ಹಕ್ಕಿಯು ಮರದ ಪೊಟರೆ, ಮನೆ-ಮಾಡುಗಳ ಸಂಧಿನಲ್ಲಿ ಗೂಡು ಕಟ್ಟುತ್ತದೆ. ಮನುಷ್ಯರ ಒಡನಾಟದಲ್ಲಿ ಹೆಚ್ಚಾಗಿ ಕಾಣ ಸಿಗುವ ರಾಬಿನ್, “ಗೂಡು ಪೆಟ್ಟಿಗೆ”ಯನ್ನು ಗೂಡು ಕಟ್ಟಲು ಆರಿಕೊಳ್ಳುವುದು ಸಾಮಾನ್ಯ. ಗೂಡು ಕಟ್ಟುವ ಕೆಲಸದಲ್ಲಿ ಹೆಣ್ಣು ಜಾಸ್ತಿ ತೊಡಗಿಸಿಕೊಂಡರೆ,ಗಂಡು ಗೂಡಿನ ರಕ್ಷಣಾ ಕಾರ್ಯ ನೋಡಿಕೊಳ್ಳುತ್ತದೆ. ಪ್ರಾಚೀನ ಕಾಲದಲ್ಲಿ ಈ ರಾಬಿನ್ ಹಕ್ಕಿಗಳನ್ನು ಇವುಗಳ ಹಾಡುವ ಸ್ವಭಾವಕ್ಕಾಗಿ ಮನೆಗಳಲ್ಲಿ ಪಂಜರದಲ್ಲಿಟ್ಟು ಸಾಕುತ್ತಿದ್ದರು. ನಮ್ಮಂತೆ ಇವುಗಳೂ ಸ್ವತಂತ್ರವಾಗಿರುವುದು ಉಚಿತವಲ್ಲವೇ?

Thursday, 7 July 2016

ಹೆಸರು....



ಹೆಸರು... 
ಮುದ್ದಾದ ಪ್ರತಿಮೆಯಂತವಳಿಗೆ 
ಹೆತ್ತವರಿಟ್ಟ ಹೆಸರು ಪ್ರತಿಮಾ... 
ಕರೆಯುತ್ತಲೇ ಕಳಚಿಕೊಂಡಿತು --ಮಾ
ಉಳಿದದ್ದು ಬರೀ 'ಪ್ರತಿ'
ಸುಲಭವಾಯಿತು ಕರೆಯಲು ದಿನಂ ಪ್ರತಿ 
ಅವಳಿಯರು ಒಬ್ಬರಿನ್ನೊಬ್ಬರ ಕರೆಯುತ್ತಾರೆ 'ಪ್ರತಿ'
ಹೌದಲ್ಲವೇ ಒಬ್ಬರಿನ್ನೊಬ್ಬರ ನೈಜಪ್ರತಿ
ಅಜ್ಜ-ಅಜ್ಜಿಯರ ನಾಮಕರಣ 'ರಾಧೆ'
ಅದನ್ನು ಮೊಟಕುಗೊಳಿಸಿ ಕರೆದರೂ 'ರಾಧೀ'
ನಾ ಕರೆಯಲೇ ಪ್ರೀತಿಯಿಂದ 'ಪ್ರೀತಿ'
ಹೆಸರಲ್ಲೇನಿದೆ ? ಪ್ರತಿ ಕರೆಯಲ್ಲೂ ಇರಬೇಕು 'ಪ್ರೀತಿ'