Wednesday, 24 February 2016

ಶಿರ್ವೆ ಗುಡ್ಡದಲ್ಲೊಂದು ಸ್ವಚ್ಚತಾ ಅಭಿಯಾನ...

ಶಿರ್ವೆ ಗುಡ್ಡದಲ್ಲೊಂದು ಸ್ವಚ್ಛತಾ ಅಭಿಯಾನ
ಇದೇ ಜನವರಿ ತಿಂಗಳ ಅಷ್ಟೇನೂ ಚಳಿಯಿಲ್ಲದೆ ತುಂಬಾ ಆಹ್ಲಾದಕರವಾದ ಒಂದು ಮುಂಜಾವು...ಬೆಳ್ಳಂಬೆಳಿಗ್ಗೆಯೇ ಕೈಗಾ ನೇಚರ್ ಕ್ಲಬ್ ಹತ್ತಿರ ಜನ ಒಗ್ಗೂಡಲು ಶುರುವಾದರು. ಹೆಂಗಸರು, ಮಕ್ಕಳು ಸೇರಿ ನೋಡತ್ತಲೇ ಸುಮಾರು 50-60 ಜನರು ಸೇರಿಯಾಯಿತು...ಎಲ್ಲರೂ ಉತ್ಸಾಹಿತರಾಗಿದ್ದು ತಲೆಗೊಂದು ಟೊಪಿ, ಕಾಲಿಗೆ ಶೂ, ಬೆನ್ನಿಗೆ ಚೀಲ, ಕಣ್ಣಿಗೊಂದು ಕಪ್ಪು ಕನ್ನಡಕ.! ಕೆಲವರ ಕೈಯಲ್ಲಿ ಕ್ಯಾಮರಾ ಮತ್ತು ದುರ್ಬೀನು...ನಿಮಗೀಗಗಲೇ ಅನಿಸಿರಬಹುದು ಇವರೆಲ್ಲಾ ಸೇರಿರುವುದು ಪ್ರಕೃತಿ ವೀಕ್ಷಣೆಗಾಗಿ!!..ಟ್ರಕ್ಕಿಂಗ್‍ಗಾಗಿ.. ಕೈಗಾ ನೇಚರ್ ಕ್ಲಬ್ ವತಿಯಿಂದ ಕೈಗಾ ವಸತಿ ಸಂಕೀರ್ಣದ ಸಮೀಪದ ಶಿರ್ವೆ ಗುಡ್ಡಕ್ಕೆ ಪ್ರಕೃತಿ ವೀಕ್ಷಣಾ ನಡಿಗೆಯನ್ನು ಆಯೋಜಿಸಿಲಾಗಿತ್ತು. ಕೈಗಾ ಪರಿಸರದ ಬಗ್ಗೆ ಓದುಗರಿಗೆ ಸ್ವಲ್ಪ ತಿಳಿಸುವುದು ಈಗ ಸಾಂದರ್ಭಿಕ. 90ರ ದಶಕದಲ್ಲಿ ಭಾರತೀಯ ಅಣು ವಿದ್ಯುತ್ ನಿಗಮವು ಕೈಗಾವನ್ನು ಅಣು ವಿದ್ಯುದಾಗಾರಕ್ಕಾಗಿ ಪ್ರದೇಶವೆಂದು ಘೋಷಿಸುವ ತನಕ ಕೈಗಾವು ಹೊರಜಗತ್ತಿಗೆ ಬಹುಷ: ತಿಳಿದೇ ಇರಲಿಲ್ಲ. ಕೈಗಾವು ಕಾರವಾರದಿಂದ ಸುಮಾರು 60 ಕಿಮೀ ದೂರದಲ್ಲಿ ಕಾಳಿನದಿಯ ದಂಡೆಯಮೇಲೆ ಪಶ್ಚಿಮ ಘಟ್ಟದ ತಪ್ಪಲಿನ್ನಲ್ಲಿರುವ ಚಿಕ್ಕ ಗ್ರಾಮ.. ಪಶ್ಚಿಮ ಘಟ್ಟವು ಯಥೇಷ್ಚ ಮಳೆಗೆ ಹೇಗೆ ಪ್ರಸಿದ್ಧವೊ ಹಾಗೆಯೇ ಇಲ್ಲಿನ ಸಸ್ಯ-ಪ್ರಾಣಿ ಸಂಕುಲಗಳ ವೈವಿದ್ಯತೆಯೂ ಪ್ರಸಿದ್ಧ... ತನ್ನದೇ ಆದ ವಿಶಿಷ್ಟ ಪರಿಸರ ವ್ಯವಸ್ಥೆಯನ್ನು ಹೊಂದಿದ ಈ ಪಶ್ಚಿಮ ಘಟ್ಟದಲ್ಲಿರುವ ಕೆಲವು ಪ್ರಾಣಿ-ಪಕ್ಷಿಗಳು ಇಲ್ಲಿ ಮಾತ್ರ ಕಾಣಸಿಗುತ್ತವೆ... ಪಶ್ಚಿಮ ದಿಕ್ಕನ್ನು ತೊರತುಪಡಿಸಿ ಸುತ್ತೆಲ್ಲಾ ಪರ್ವತಗಳಿಂದ ಸುತ್ತವರಿದ ಕೈಗಾವು ಬಟ್ಟಲಿನಾಕಾರವಾಗಿ ಕಂಡಬರುತ್ತದೆ. ಕೈಗಾ ವಸತಿ ಸಂಕೀರ್ಣವು ಕೈಗಾದಿಂದ ಸುಮಾರು 18 ಕಿಮೀ ದೂರದಲ್ಲಿದ್ದು ಇದೂ ಸಹ ಪರ್ವತಗಳಿಂದ ಸುತ್ತುವರಿದಿದೆ...ಅಷ್ಟೇ ಅಲ್ಲದೆ ಪರ್ವತಗಳೆಲ್ಲಾ ದಟ್ಟವಾದ ಕಾಡಿನಿಂದ ಹೊದಿಯಲ್ಪಟ್ಟಿದೆ..ಸಮೀಪದಲ್ಲಿ ಹರಿಯುವ ಕಾಳಿನದಿಯು ಪ್ರದೇಶದ ಸೊಬಗನ್ನು ಇನ್ನಷ್ಟು ಹೆಚ್ಚಿಸಿದೆ..ಸುತ್ತು ಕಣ್ಣಹಾಯಿಸಿದಷ್ಟು ಹಚ್ಚಹಸಿರೇ ಕಾಣಸುತ್ತದೆ...ಈ ಪ್ರಕೃತಿಯ ಮಡಿಲಲ್ಲಿರುವ ನಮಗೆ ಅಕ್ಷರಸ: ಹಸಿರೇ ಉಸಿರು.!!!
ಕೈಗಾ ನೇಚರ್ ಕ್ಲಬ್‍ನ ಎದುರು ಸೇರಿದವರೆಲ್ಲಾ ಸಾಲಾಗಿ ನಿಂತ ನಂತರ ಕ್ಲಬ್‍ನ ಸದಸ್ಯ ಶ್ರೀ ಹರದೀಪ್ ಸಿಂಗ್‍ರಿಂದ ಶಿರ್ವೆ ಗುಡ್ಡದ ಟ್ರಕ್ಕಿಂಗ್‍ನ ವಿವರಣೆ ಹಾಗೂ ಉಪಯುಕ್ತ ಸಲಹೆ-ಸೂಚನೆಗಳು. ನಂತರ ಕ್ಲಬ್‍ನ ಕಾರ್ಯದರ್ಷಿ ಶ್ರೀ ವೇಣುಗೋಪಾಲರಿಂದ ಈ ಪ್ರಕೃತಿ ವೀಕ್ಷಣೆಯ ಮಹತ್ವದ ಬಗ್ಗೆ ಸಂಕ್ಷಿಪ್ತ ವಿವರಣೆ. ಕಳೆದ 5-6 ವರ್ಷಗಳಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು ಪ್ರತಿ ವರ್ಷವೂ ನಿರೀಕ್ಷೆಗೆ ಮೀರಿ ಪ್ರತಿಕೃಯೆ ಬರುತ್ತಿದ್ದು, ಪ್ರಕೃತಿ ವೀಕ್ಷಣೆಯ ಸಂಗಡ “ಸ್ವಚ್ಛತಾ ಅಭಿಯಾನ”ವನ್ನೂ ನಡೆಸುತ್ತಾ ಬರಲಾಗುತ್ತಿದೆ. ಪ್ರತಿ ವರ್ಷವೂ ಮಕರ ಸಂಕ್ರಾಂತಿಯ ಮಾರನೇ ದಿನ ಈ ಶಿರ್ವೆಗುಡ್ಡದಲ್ಲಿರುವ ಚೆನ್ನಬಸವೇಶ್ವರ ದೇವಾಲಯದಲ್ಲಿ ಜಾತ್ರೆಯಾಗುತ್ತಿದ್ದು 5 ಕಿಮೀ ಕಾಲ್ನಡಿಗೆಯಲ್ಲಿಯೇ ಸಾವಿರಾರು ಜನರು ಸೇರುತ್ತಾರೆ... ಜಾತ್ರೆ ಹಗಲೂ-ರಾತ್ರಿ ಇಡೀ ದಿನ ನಡೆದು, ರಾತ್ರಿ ಯಕ್ಷಗಾನ/ನಾಟಕ ಇತ್ಯಾದಿ ಮನೋರಂಜನಾ ಕಾರ್ಯಕ್ರಮಗಳೂ ನಡೆಯುತ್ತವೆ...ಪ್ರಕೃತಿಯ ಮಡಿಲಲ್ಲಿರುವ ಈ ದೇವಾಲಯದ ಜಾತ್ರೆಯು ಜನರಿಗೆ ಪ್ರಕೃತಿ ವೀಕ್ಷಣೆಯೊಂದಿಗೆ ಆಧ್ಯಾತ್ಮಿಕ ಹಬ್ಬವೂ ಆಗಿದೆ.. ಸಾವಿರಾರು ಜನಸೇರುವ ಜಾತ್ರೆಯಂದರೆ ಕೇಳವೇಕೇ..? ಎಲ್ಲವೂ ಪ್ಲಾಷ್ಟಿಕ್‍ಮಯವಾದ ಈ ಕಾಲದಲ್ಲಿ ಶಿರ್ವೆಗುಡ್ಡ ಪ್ರತಿವರ್ಷ ಕಸದತೊಟ್ಟಿಯಾಗುತ್ತಿತ್ತು...ಪ್ರಕೃತಿಯ ಬಗ್ಗೆ ಕಾಳಜಿಯಿರುವ ಒಂದಿಷ್ಟು ಜನರ ಪರಿಶ್ರಮದ ಕೂಸಾಗಿ ಈ ಶಿರ್ವೆಗುಡ್ಡದ ಪ್ರಕೃತಿ ವೀಕ್ಷಣೆಯ ಸಂಗಡ “ಸ್ವಚ್ಛತಾ ಅಭಿಯಾನ” ಆರಂಭಗೊಂಡಿತು. ನಮ್ಮನ್ನು ಪ್ರೀತಿಯಿಂದ ಸಾಕುತಿರುವ ಪ್ರಕೃತಿ ಮಾತೆಯ ಉಳಿವಿಗೆ ಚಿಕ್ಕದೊಂದು ಕೊಡುಗೆ.. ಕಾರ್ಯಕ್ರಮ ರೋಮಾಂಚಕ, ಮನೋರಂಜನೆಯ ಜೊತೆಗೆ ಅರ್ಥಗರ್ಭಿತವೂ ಆಗಿತ್ತು. ಈ ಭಾರಿ ನಾನೂ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಮುಖ್ಯ ಅಧೀಕ್ಷಕರಾದ ಶ್ರೀ ಕೆ ಕೆ ಬಜಾಜ್‍ರ ಹಸಿರು ನಿಶಾನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು.
ಸುಮಾರು 15 ಕಿಮೀ ಬಸ್ ಪ್ರಯಾಣದ ಬಳಿಕ ನಾವು ಗುಡ್ಡದ ಬುಡಕ್ಕೆ ಬಂದೆವು. ಅಲ್ಲಿಯೇ ನಮ್ಮ ಬೆಳ್ಳಗಿನ ಉಪಹಾರ...ರುಚಿ-ರುಚಿಯಾದ ಇಡ್ಲಿ-ವಡೆ. ನಾವೆಲ್ಲರೂ ಮನೆಯಿಂದಲೇ ಸ್ಷೀಲ್ ತಟ್ಟೆ ಹಾಗೂ ಲೋಟಗಳನ್ನು ತಂದಿದ್ದೆವು....ಮರಗಳ ನೆರಳಲ್ಲಿ ಕೂತು ಸುತ್ತಮುತ್ತಲಿನ ಪರಿಸರ ವೀಕ್ಷಿಸುತ್ತಾ ನಾಷ್ಟಾ ಮಾಡಿದೆವು. ವಾತಾವರಣ ತಂಪಾಗಿ ಉಲ್ಲಾಸಕರವಾಗಿತ್ತು. ಟೀ ಕುಡಿದೆವು. ಮುಂದಿನ ಪ್ರಯಾಣ ಶಿರ್ವೆಗುಡ್ಡಕ್ಕೆ!..ಗುಡ್ಡದ ತುದಿ ಅಲ್ಲಿಂದಲೇ ಕಾಣಿಸುತ್ತಿತ್ತು. ಪ್ರತಿಯೊಬ್ಬರಿಗೂ ಕಸತುಂಬಲು ಒಂದೊಂದು ಚೀಲ ಕೊಡಲಾಯಿತು..ಪ್ಲಾಷ್ಟಿಕ್ ಕಸಗಳನ್ನು ಮಾತ್ರ ತೆಗೆಯಲು ಆಯೋಜಿತರಿಂದ ಸಲಹೆ. ಪ್ರಯಾಣಿಸುವ ದಾರಿ ಸಾಕಷ್ಟು ಅಗಲವಾಗಿಯೇ ಇತ್ತು. ಇಕ್ಕೆಲಗಳಲ್ಲಿ ದಟ್ಟವಾದ ಎತ್ತರವಾದ ಕಾಡು. ಎರಡೂ ಬದಿಯ ಮರಗಳ ಕೊಂಬೆಗಳು ಮಧ್ಯೆಕ್ಕೆ ಚಾಚಿ ನಮ್ಮ ದಾರಿಗೆ ಚಪ್ಪರಹಾಕಿದಂತಿತ್ತು. ಆ ಮರಗಳ ನೆರಳು ನಮ್ಮ ನಡಿಗೆಯನ್ನು ಸಲೀಸಾಗಿಸಲ್ಲದೆ ಹುರಿದುಂಬಿಸಿತಿತ್ತು. ಆ ದಟ್ಟಕಾಡಿನ ಮರಗಳು ವಿಭಿನ್ನವಾಗಿದ್ದವು. ಹೆಚ್ಚಾಗಿ ನಿತ್ಯಹರಿದ್ವರ್ಣದ ಮರಗಳಿದ್ದರೂ ಚಳಿಗಾಲದಲ್ಲಿ ಎಲೆ ಉದುರಿಸಿಕೊಳ್ಳುವ ಅನೇಕ ಮರಗಳಿದ್ದವು. ಆ ಮರಗಳು ಬೇರೆ ಬೇರೆ ಹಂತದಲ್ಲಿದ್ದು ವಿಭಿನ್ನ ಬಣ್ಣದಿಂದ ಕಂಗೊಳಿಸುತ್ತಿದ್ದವು..ಕೆಲವು ಹಣ್ಣೆಲೆಗಳಿಂದ ಕೆಂಪು, ಹಳದಿ ಬಣ್ಣದಿಂದ ಅಲಂಕೃತವಾಗಿದ್ದರೆ ಇನ್ನು ಕೆಲವು ಈಗಷ್ಟೇ ಕುಡಿಬಂದು ನೇರಳೆ, ಕಂದು, ಕೆಂಪು, ತಿಳಿಹಸಿರು, ಹಚ್ಚಹಸಿರು ಬಣ್ಣದಿಂದ ತಂಬಿದ್ದು ರಥಗಳಂತೆ ಕಂಡುಬಂದವು.!! ಇನ್ನು ಕೆಲವು ಗೊಮ್ಮಟೇಶ್ವರನಂತೆ ಬೋಳಾಗಿದ್ದವು.!!!!ಮರಗಳಿಂದ ಬಿದ್ದ ಒಣಎಲೆಗಳು ನಮ್ಮ ದಾರಿದಲ್ಲಿ ಹಾಸಿಗೆ ಹಾಸಿದಂತಿತ್ತು. ಪ್ರಕೃತಿಯ ಸೊಬಗು ಒಂದೆಡೆಯಾದರೆ ದಾರಿಯುದಕ್ಕೂ ನೀರಿನ ಬಾಟೆಲ್, ಬಿಸ್ಕೆಟ್ ಪ್ಯಾಕ್‍ಗಳು, ಚಾಕಲೇಟ್ ಜರಿಗಳು ಜನರ ಪ್ರಕೃತಿಯ ಬಗ್ಗೆಯ ಅಸಡ್ಡೆಯನ್ನು ತೋರಿಸಿತಿತ್ತು. ಈ ಕಸಗಳನ್ನೆಲ್ಲಾ ಹೆಕ್ಕಿ ಚೀಲದಲ್ಲಿ ತುಂಬಲು ಶುರುಮಾಡಿದೆವು. ಹಾಗೆ ತುಂಬಿದ ಚೀಲವನ್ನು ಅಲ್ಲಿಯೇ ಬರುವಾಗ ತರಲು ಬದಿಗಿಟ್ಟೆವು...ಮೊದಲು ಸಮತಲವಾಗಿದ್ದ ದಾರಿ ಮುಂದುಹೊಗುತ್ತಿದ್ದಂತೆ ಏರಿಕೆಯಾಗಲು ಶುರುವಾದರೂ ಪ್ರಯಾಣ ಕಷ್ಟಕರವೇನೂ ಆಗಿರಲಿಲ್ಲಿ. ಆದರೆ ದಾರಿಯು ಇಳಿಜಾರಾದ ಗುಡ್ಡದ ಅಂಚಿನಲ್ಲಿ ಸಾಗುತ್ತಿದ್ದು ಎಡಗಡೆ ಕಣಿವೆ ಹಾಗೂ ಬಲಗಡೆ ಕಡಿದಾದ ಪರ್ವತವಿತ್ತು...ಹೀಗೆ ಸಾಗುತ್ತಿರುವಾಗ ನಮ್ಮ ಮುಂದೆ ಸಾಗುತ್ತಿದ್ದ ಗುಂಪೊಂದು ನಿಂತು ಏನನ್ನೋ ತದೇಕ ದೃಷ್ಟಿಯಿಂದ ನೋಡುತ್ತಿರುವುದು ಕಂಡುಬಂತು...ಕೂಡಲೇ ಧಾವಿಸಿ ನೋಡಿದಾಗ ಕಂಡುಬಂದದ್ದು ಒಂದು ಮರಿಹಾವು...ಮಂಡಲಹಾವಾಗಿತ್ತು. ಶಾಂತವಾಗಿದ್ದ ಹಾವಿನ ಫೋಟೋ ತೆಗೆದುಕೊಂಡೆವು...ಕೆಲವರಂತೂ “ಸೆಲ್ಫೀ ವಿದ್ ಸ್ನೇಕ್” ಸಹ ತೆಗೆಸಿಕೊಂಡರು..
ಸುಮಾರು ಒಂದು ಗಂಟೆಯ ಪ್ರಯಾಣದ ನಂತರ ನಾವು ತಲುಪಿದ್ದು ಚೆನ್ನಬಸವೇಶ್ವರ ದೇವಾಲಯ...ಸಾಕಷ್ಟು ಸಮತಟ್ಟಾದ ಪ್ರದೇಶದಲ್ಲಿ ದೇವಾಲಯದ ಸುತ್ತಲೂ ಹಸಿರು ಹೊದಿಕೆ ಹೊದ್ದ ಪರ್ವತಗಳು...ಅಲ್ಲಿಯೇ ಒಂದು ಚಿಕ್ಕ ಝರಿಯಲ್ಲಿ ತಂಪಾದ ನೀರು ಹರಿದು ಬರುತಿತ್ತು..ಕಾಲು-ಮುಖ ತೊಳೆದು ಸ್ವಲ್ಪ ದಣಿವಾರಿಸಿಕೊಂಡೆವು. ನಾವು ಹತ್ತಬೇಕಾಗಿದ್ದ ಶಿರ್ವ ಗುಡ್ಡದ ತುತ್ತ ತುದಿ ಕಾಣಿಸಿತ್ತಿತ್ತು. ಅದರ ಮೇಲೊಂದು ಬಿಳಿಬಟ್ಟೆಯ ಭಾವುಟ ಹಾರಾಡುತಿತ್ತು...ಆ ಎತ್ತರದ ಗುಡ್ಡದ ಮೇಲೆ ಬೀಸುತ್ತಿರುವ ತಂಗಾಳಿ ದಣಿವಾರಿಸದ್ದಲ್ಲೇ ನಮ್ಮನ್ನು ಮುಂದಿನ ಕಾರ್ಯಕ್ರಮಕ್ಕೆ ಹುರಿದುಂಭಿಸಿತಿತ್ತು.!





ದೇವಾಲಯದ ಸುತ್ತಲೂ ಸಾಕಷ್ಟು ಪ್ಲಾಷ್ಟಿಕ್ ಕಸಗಳಿದ್ದವು. ಶುರುಮಾಡಿದೆವು ನಮ್ಮ ಸ್ವಚ್ಛತಾ ಅಭಿಯಾನ.! ಎಲ್ಲರೂ ಹುಮ್ಮಸ್ಸಿನಿಂದ, ನಿಷ್ಟೆಯಿಂದ   ಪ್ಲಾಷ್ಟಿಕ್ ಕಸಗಳನ್ನು ಹೆಕ್ಕಿ ಚೀಲಕ್ಕೆ ತುಂಬುತ್ತಿದ್ದರು...45 ನಿಮಿಷಗಳಲ್ಲಿ ದೇವಸ್ಥಾನದ ಪರಿಸರವೆಲ್ಲಾ ಕ್ಲೀನ್!!.ಎಲ್ಲರೂ ಸೇರಿ ಮಾಡಿದ ಕೆಲಸದಲ್ಲಿ ಆಯಾಸವೇ ಅನಿಸಿರಲಿಲ್ಲ...ಮತ್ತೊಮ್ಮೆ ಕೈ-ಮುಖ ತೊಳೆದು ಮುಂದಿನ ಪರ್ವತಾರೋಹಣಕ್ಕೆ ಶುರು.!
 ಮುಂದಿನ ನಡಿಗೆಗೆ “ಪರ್ವತಾರೋಹಣ” ಶಬ್ದ ಸರಿಯೆನಿಸಿತು. ಒಬ್ಬರೇ ನಡೆಯಬಹುದಾದ ತುಂಬಾ ಕಿರಿದಾದ ದಾರಿ, ಅಲ್ಲಲ್ಲಿ ಸಣ್ಣ-ದೊಡ್ಡ ಕಲ್ಲುಗಳು...ಏರಿಕೆ ತುಂಬಾನೇ ತ್ರಾಸತರುತಿತ್ತು. ಸ್ವಲ್ಪ ಜಾರಿ ಬಿದ್ದರೂ ಸಾವರಿಸಿಕೊಳ್ಳುವುದು ಕಷ್ಟವೇ...ಅಲ್ಲದೇ ಒಬ್ಬರಿಂದ ಇನ್ನೊಬ್ಬರು/ಮತ್ತೊಬ್ಬರು ಸರಣಿಯಲ್ಲಿ ಬೀಳುವ ಸಂಭವವೂ ಇದೆ. ಕಿರಿದಾದ ದಾರಿಯಲ್ಲಿ ಮುಂದಿರುವರನ್ನು ಹಿಂದಿಕ್ಕುವ ಕೆಲಸ ಸಾಧ್ಯವಿಲ್ಲ...ಕೈಯಲ್ಲಿರುವ ಕೋಲು ನಮ್ಮ ಸಮತೋಲನ ಕಾಪಾಡಲು ಸಹಾಯ ಮಾಡುತಿತ್ತು. ಅರಣ್ಯ ಮತ್ತೂ ದಟ್ಟವಾಯಿತು...ಪರಿಸರ ವೀಕ್ಷಣೆ ಈಗ ಅಸಾಧ್ಯವೇ ಸರಿ...ಪ್ರತಿಯೊಂದು ಹೆಜ್ಜೆಯಿಡುವಾಗಲೂ ನೋಡಿ ಜಾಗರೂಕತೆಯಿಂದ ಇಡಬೇಕು...ಅಲ್ಲಲ್ಲಿ ಅನುಕೂಲಕರ ಜಾಗ ನೋಡಿ ಸ್ವಲ್ಪ-ಸ್ವಲ್ಪ ಕುಳಿತುಕೊಂಡು ಮುಂದೆಸಾಗುತಿದ್ದೆವು. 45 ನಿಮುಷ ಕ್ಲಿಷ್ಟಕರವಾದ ಪ್ರಯಾಣದ ನಂತರ ಸಿಕ್ಕಿದ್ದು ಶಿರ್ವಗುಡ್ಡದ ತುತ್ತ ತುದಿ..ಕೊನೆಯ 20 ಮೀ ಕಡಿದಾದ ಬಂಡೆಯಾಗಿದ್ದು ಹತ್ತಲು ಏಣಿಯೇ ಬೇಕು. ಗುಡ್ಡದ ಆ ಶಿಖರವನ್ನು ಎಲ್ಲಿಂದಲೋ ಆಕಾಶ ಮಾರ್ಗವಾಗಿ ತಂದು ಕೂರಿಸಿಟ್ಟಂತಿತ್ತು.!! ಅದನ್ನೂ ಹತ್ತಿದಾಗ ಆದ ಅನುಭವ ಅವರ್ಣನೀಯ.!!. ಪರ್ವತದ ತುದಿಯಿಂದ ವೀಕ್ಷಿಸಿದಾಗ ಎಲ್ಲವೂ ‘ಪಕ್ಷಿನೋಟ’. ಎಡಕ್ಕೂ ಬಲಕ್ಕೂ ಸ್ವಲ್ಪ ಕಿರಿದಾದ ಬೆಟ್ಟಗಳು...ಮುಂದೆ ಮತ್ತು ಹಿಂದೆ ಇಳಿಜಾರು ಪ್ರದೇಶ...ಸುತ್ತಮುತ್ತಲಿನ ಎಲ್ಲಾ ಪರ್ವತಗಳನ್ನು ಹೊದ್ದಿರುವ ದಟ್ಟದಾದ ಹಚ್ಚ ಹಸಿರಿನ ಕಾಡುಮರಗಳು.. ಹಚ್ಚ ಹಸಿರಿನ ಮಧ್ಯೆ-ಮಧ್ಯೆಯೊಂದಿಷ್ಟು ಕೆಂಪು, ಕಂದು, ನೇರಳೆ, ಹಳದಿ ಬಣ್ಣಗಳ ವಿವಿಧ ಚಳಿಗಾಲದಲ್ಲಿ ಎಲೆಉದುರುವ ಮರಗಳು. ಧಿಟ್ಟವಾಗಿ ನಿಂತಿದ್ದ ಪರ್ವತಗಳು ಹೊದ್ದ ಹಸಿರು ಹೊದಿಕೆಯ ಮೇಲೆ ಮೂಡಿಸಿದ ಬಣ್ಣ-ಬಣ್ಣದ ಚಿತ್ತಾರದಂತಿತ್ತು.!!! ದೂರದಲ್ಲಿ ಕೈಗಾ ವಸತಿ ಸಂಕೀರ್ಣ ಕಟ್ಟಡಗಳು ಹಸಿರು ಪಾರ್ಕಿನ ಮಧ್ಯದಲ್ಲಿ ನಿರ್ಮಿಸಿದಂತಿತ್ತು. ನಾವಿರುವ 12 ಮಹಡಿಯ ಕಟ್ಟಡ ಸಹಾ ಚಿಕ್ಕದಾಗಿ ಕಾಣಿಸಿತಿತ್ತು. ಅದರ ಹಿಂದೆ ಕಾಳಿ ನದಿ ಮತ್ತು ಮತ್ತೊಂದು ಸಾಲು ಪರ್ವತ ಶ್ರೇಣಿಗಳು... ಕೈಗಾ ವಸತಿ ಸಂಕೀರ್ಣದ ಸ್ವಲ್ಪ ಬಲಗಡೆ ಕದ್ರಾ ಅಣೆಕಟ್ಟು ಮತ್ತು ಜಲಾಶಯ... ಗುಡ್ಡದ ಹಿಂಬದಿಯಲ್ಲೂ ಇಳಿಜಾರದ ಕಾಡು ಪ್ರದೇಶ, ನಂತರ ಕೆಲ ಗ್ರಾಮಗಳು, ನಂತರ ಮತ್ತೊಂದು ಪರ್ವತ ಶ್ರೇಣಿ!!!.ಈ ಕಾಡು-ನದಿ-ಬೆಟ್ಟಗಳ ಸಂಯೋಜನೆಯು ಚಿತ್ರಕಲಾಕಾರನ ಕುಂಚದಲ್ಲಿ ಮೂಡುವ ಪ್ರಕೃತಿ ದೃಶ್ಯದ ಸಂಯೋಜನೆಯಂತಿತ್ತು. ಅದ್ಭುತವಾದ ದೃಶ್ಯ!!..
ಆಹ್ಲಾದಕರ ವಾತಾವರಣ...ಆ ತುತ್ತತುದಿಯಲ್ಲಿ ನೆಟ್ಟಿದ್ದ  ಬಿಳಿಬಣ್ಣದ ಭಾವುಟ.ಬೀಸುವ ಗಾಳಿಗೆ ಹಾರಾಡುತಿತ್ತು. ಶಿಖರದ ಮೇಲೆ ಚಿಕ್ಕ ಬಸವೇಶ್ವರನ  ಗುಡಿಯಿದ್ದು ದೊಡ್ಡದಾದ ಹಣತೆಯಿದೆ. ಮಕರ ಸಂಕ್ರಾಂತಿಯ ಮಾರನೇದಿನ ಬೆಳಗಿನ ಜಾವ 5 ಗಂಟೆಯ ಸುಮಾರಿಗೆ ಇಲ್ಲಿನ ಬಸವೇಶ್ವರ ದೇವರಿಗೆ ಪೂಜೆಮಾಡಿ ಹಣತೆಯಲ್ಲಿ ದೀಪ ಹಚ್ಚಲಾಗುತ್ತದೆ. ಸುಮಾರು 200 ವರ್ಷಗಳ ಹಿಂದೊಮ್ಮೆ ಅರಬೀ ಸಮುದ್ರದಲ್ಲಿ ದಿಕ್ಕು ತಪ್ಪಿದ ಬ್ರಿಟಿಷರ ಹಡಗು, ಈ ದೀಪ ನೋಡಿ ದಡ ಸೇರಲಾಗಿತ್ತು ಎನ್ನುವ ಪ್ರತೀತಿಯೂ ಇದೆ. ಆ ಪರ್ವತ ತುದಿಯಲ್ಲೂ ಊದುಬತ್ತಿಯ ಪ್ಯಾಕೇಟ್, ಪ್ಲಾಷ್ಟಿಕ್ ಕವರ್ ಇತ್ಯಾದಿ ಕಸ ಬಿದ್ದಿದ್ದು ಅದನ್ನೂ ತೆಗೆಯಲಾಯಿತು. ಇನ್ನೊಂದು ವಿಶೇಷವೆಂದರೆ ಅಲ್ಲಿರುವ ಬಾವಿ...ಆ ಶಿಖರದ ಮೇಲೊಂದು ಕಲ್ಲಿನಿಂದಲೇ ಕಡಿದ ಬಾವಿಯಿದ್ದು ಅದರಲ್ಲಿ ಸುಮಾರು 2 ಮೀಟರನಷ್ಟ ನೀರಿತ್ತು!!... ಕಲ್ಲಲ್ಲಿ ಕಡಿದ ಬಾವಿಯು ಕಾಂಕ್ರೀಟಿನ ನೀರಿನ ಟ್ಯಾಂಕಿಯಂತಿದ್ದು ಮಳೆಗಾಲದಲ್ಲಿ ಶೇಖರವಾದ ನೀರಿನ್ನೂ ಬತ್ತಿರಲಿಲ್ಲ... ಸುತ್ತಮುತ್ತಲಿನ ಪ್ರಕೃತಿಯ ಫೋಟೋ, ಕುಳಿತು ನಿಂತು ಫೋಟೋ ತೆಗಿಸಿಕೊಂಡೆವು...ಸೂರ್ಯನ ಬಿಸಿಲು ತೀಕ್ಷವಾಗಿದ್ದರೂ ಸಣ್ಣದಾಗಿ ಬೀಸುತಿದ್ದ ತಂಗಾಳಿ ಮತ್ತು ಕಣ್ಮುಂದಿನ ಮನಮೋಹಕ ದೃಶ್ಯಗಳಿಂದಾಗಿ ಬಿಸಿಲು ನಗಣ್ಯವೆನಿಸಿತ್ತು. ಯಾವತ್ತೂ ಸಿಗದ ರೋಚಕ ಅನುಭವ ಅದಾಗಿತ್ತು...ಅಲ್ಲಿರುವ ಮರಗಳ ನೆರಳಿನಲ್ಲಿ ಕುಳಿತೇ ಇದ್ದುಬಿಡುವಾ ಅನಿಸುತಿತ್ತು...ಆದರೇನು ವಾಪಾಸಾಗುವ ಅನಿವಾರ್ಯತೆ.
ಇಳಿಜಾರು ದಾರಿಯಲ್ಲಿ ಮರುಪ್ರಯಾಣ ಶುರು ಮಾಡಿದೆವು.. ಬೆಟ್ಟವೇರಿದಷ್ಟು ಕಷ್ಟವಲ್ಲದಿದ್ದರೂ ಇಳಿಯುವಾಗಲೂ ಜಾಗರೂಕತೆಯಿಂದಿರಬೇಕು...ಮುಗ್ಗರಿಸಿ ಬೀಳುವ ಅಪಾಯ...ಸಂತುಲನ ತಪ್ಪಿದರೆ ದೇವರೇಗತಿ!...ಹೋಗುವಾಗ ಕೊಂಡ್ಯೊದಿದ್ದ ಖಾಲಿಚೀಲಗಳು ಈಗ ತುಂಬಿದ್ದವು. ಒಬ್ಬೊಬ್ಬರ ಕೈಯಲ್ಲೂ ಒಂದೊಂದು ಚೀಲ...ಇಳಿದು ಬೆಟ್ಟದ ಬುಡಕ್ಕೆ ಬಂದಾಗ ಅಲ್ಲಿಯೇ ಸ್ಥಳೀಯರ  ಮನೆಯಲ್ಲಿ ಊಟ ತಯಾರಾಗಿತ್ತು. ಊಟಮಾಡಿ ಸ್ವಲ್ಪ ದಣಿವಾರಿಕೊಂಡೆವು. ಎಲ್ಲರೂ ತಂದ ಕಸದ ಚೀಲ ಒಟ್ಟುಸೇರಿಸಿದಾಗ ದೊಡ್ಡ ರಾಶಿಯೇ ಆಯಿತು. ಎಲ್ಲವನ್ನೂ ಬಸ್ಸಿನಲ್ಲಿ ಹಾಕಿಕೊಂಡು ಬಂದೆವು. ಪರ್ವತ ನಡಿಗೆ, ಪ್ರಕೃತಿ ವೀಕ್ಷಣೆಯ ಜೊತೆಗೆ ಸ್ವಚ್ಛತಾ ಅಭಿಯಾನವೂ ನಡೆಯಿತು. ಪ್ರಕೃತಿ ಮಾತೆಯ ಸಂರಕ್ಷಣೆಗೆ ನಮ್ಮಿಂದಾದ ಕೆಲಸಮಾಡಿದಕ್ಕೆ ಹೆಮ್ಮೆಯಾಯಿತು.
ನಾಗರಾಜ ಅಡಿಗ, ಕೈಗಾ ವಿದ್ಯುತ್ ಉತ್ಪಾದನಾ ಕೇಂದ್ರ, ಕೈಗಾ.

ಫೋಟೋ- ಶ್ರೀನಿವಾಸ ಪಂಚಮುಖಿ, ಕೈಗಾ ವಿದ್ಯುತ್ ಉತ್ಪಾದನಾ ಕೇಂದ್ರ, ಕೈಗಾ.     

Monday, 22 February 2016

ಪುಟ್ಟ ಹಕ್ಕಿಯ ಪುಟ್ಟ ಸಂಸಾರ!!!

ಪುಟ್ಟ ಹಕ್ಕಿಯ ಪುಟ್ಟ ಸಂಸಾರ!!!
ನಮ್ಮ ಬಾಲ್ಯದ ದಿನಗಳ ಸ್ನೇಹಿತರಾದ ಗುಬ್ಬಚ್ಚಿಗಳು ಈ ದಿನಗಳಲ್ಲಿ ಅತ್ಯಂತ ವಿರಳವಾಗಿ ಕಾಣಸಿಗುತ್ತಿವೆ. ಒಂದೊಮ್ಮೆ ನಮ್ಮ ಮನೆಯಲ್ಲಿ 10-15 ಗುಬ್ಬಚ್ಚಿಗಳು ಗೂಡು ಕಟ್ಟಕೊಂಡು ವಾಸಿಸುತ್ತಿದ್ದವು. ಇಂದು ಗುಬ್ಬಚ್ಚಿಗಳು ಕಾಣಸಿಗುವುದೇ ತುಂಬಾ ಅಪರೂಪ. ಆದಾಗ್ಯೂ ನಾವಿರುವ ಕೈಗಾ ವಸತಿ ಸಂಕೀರ್ಣದಲ್ಲಿ ಗುಬ್ಬಚ್ಚಿಗಳು ತುಂಬಾ ಇಲ್ಲವಾದರೂ, ಬೇರೆ ಪಟ್ಟಣ-ಪ್ರದೇಶಗಳಿಗೆ ಹೋಲಿಸಿದರೆ ಸಾಕಷ್ಟು ಸಂಖ್ಯೆಯಲ್ಲಿ ವಾಸಿಸುತ್ತಿವೆ. ಗುಬ್ಬಚ್ಚಿಗಳನ್ನು ಆಕರ್ಷಿಸುವ ದೃಷ್ಟಿಯಲ್ಲಿ ನಮ್ಮ ಎಂಟನೇ ಮಹಡಿಯ ಬಾಲ್ಕನಿಯಲ್ಲಿ ಅಕ್ಕಿಯನ್ನೂ, ನೀರನ್ನೂ ಇಡಲಾರಂಭಿಸಿದೆವು. ಹಾಗೆಯೇ ನೊಡೋಣವೆಂದು ಒಂದು ಚಿಕ್ಕ ರಟ್ಟಿನ ಪೆಟ್ಟಿಗೆಯನ್ನೂ ರಂದ್ರಮಾಡಿ ಬಾಲ್ಕನಿಯ ಮೇಲ್ಚಾವಣಿಗೆ ಅಂಟಿಸಿದೆವು. ಅಕ್ಕಿ ತಿನ್ನಲು, ನೀರು ಕುಡಿಯಲು ಗುಬ್ಬಚ್ಚಿಗಳೆನೋ ಬರುತ್ತಿದ್ದವು. ಆದರೆ ಪೆಟ್ಟಿಗೆ ಕಡೆಗೆ ಹೋಗುತ್ತಿರಲಿಲ್ಲ.
ಐದಾರು ತಿಂಗಳ ನಂತರ ಒಂದು ಮುಂಜಾವು “ಚೀಂವ್....ಚೀಂವ್” ಎನ್ನುವ ರಾಗ ತುಂಬಾ ಹತ್ತಿರದಲ್ಲಿ ಕೇಳಿಸಿದಾಗ ಕಿವಿ ನವಿರೇಳಿತು. ಬಾಲ್ಕನಿಗೆ ಹೋಗಿ ನೋಡಿದರೆ ಅಂದುಕೊಂಡಂತೇ ರಟ್ಟಿನ ಪೆಟ್ಟಿಗೆಯಲ್ಲಿ ಹಕ್ಕಿಯೋಂದು ಗೂಡು ಕಟ್ಟುತ್ತಿರುವ ಅಪರೂಪದ, ಆಶ್ಚರ್ಯದ, ಕುತೂಹಲದ ದೃಶ್ಯ ಕಣ್ಣಿಗೆ ಬಿತ್ತು. ಆದರೆ ಆ ಹಕ್ಕಿ ಗುಬ್ಬಚ್ಚಿಯಾಗಿರದೇ, ಅದಕ್ಕಿಂತಲೂ ಚಿಕ್ಕದಾದ ಕಂದು ಬಣ್ಣದ ಹಕ್ಕಿಯಾಗಿತ್ತು. ನಾವಿಟ್ಟ ಪೆಟ್ಟಿಗೆಯು ಗೂಡು ಕಟ್ಟಲು ಅನುಕೂಲಕರ ಹಾಗೂ ಸುರಕ್ಷಿತ ಎಂದು ಗೂಡು ಕಟ್ಟಲು ಶುರು ಮಾಡಿದೆ. ಕುತೂಹಲದಿಂದ ಇಂಟರ್ ನೆಟ್  ಹುಡುಕಿದಾಗ ಅದು “ಮುನಿಯಾ” ಜಾತಿಗೆ ಸೇರಿದ “ಕಪ್ಪು ಗಂಟಲಿನ ಮುನಿಯಾ” ಎಂದು ತಿಳಿಯಿತು.   
ನನ್ನ ಕುತೂಹಲಕ್ಕೆ ಪಾರವೇ ಇಲ್ಲ. ರಾತ್ರಿ ಪಾಳಿ ಕೆಲಸ ಮಾಡಿ ಬಂದರೂ ನಿದ್ರಿಸದೆ ಈ ಕುತೂಹಲದ ದೃಶ್ಯವನ್ನು ವೀಕ್ಷಿಸಲಾರಂಭಿಸಿದೆ. ಗೂಡಿಗಾಗಿ ಕಸ-ಕಡ್ಡಿ, ಹುಲ್ಲು, ಒಣಗಿದ ಎಲೆ ಇತ್ಯಾದಿ ವಸ್ತುಗಳನ್ನು ತರುವುದು ಸಾಮಾನ್ಯವಾಗಿತ್ತು. ಆದರೆ ತೀರಾ ಕುತೂಹಲ ಕೆರಳಿಸಿದ ವಿಷಯವೇನೆಂದರೆ ಹಕ್ಕಿಗಳು ತುಳಸಿ ಎಲೆ, ತುಳಸಿ ಹೂವು ಮತ್ತು ಕರಿಬೇವಿನ ಎಲೆಗಳನ್ನು ಎಲ್ಲಿಂದಲೋ ತಂದು ಗೂಡು ಕಟ್ಟುತ್ತಿತ್ತು. ಸುತ್ತಮುತ್ತ ಬೇಕಾದಸ್ಟು ಗಿಡಗಳಿರುವ ಪ್ರದೇಶದಲ್ಲಿ ಗೂಡುಕಟ್ಟಲು ತುಳಸಿ ಮತ್ತು ಕರಿಬೇವಿನ ಎಲೆಗಳನ್ನು ಬಳಸಿತ್ತಿರುವುದು ಆಶ್ಚರ್ಯವಲ್ಲವೇ? ಈ ಚಿಕ್ಕ ಹಕ್ಕಿಗೆ ತುಳಸಿ ಮತ್ತು ಕರಿಬೇವಿನ ಆಯುರ್ವೇದೀಯ ಗುಣಗಳು ಗೊತ್ತಿದೆಯೇ? 
ಗೂಡು ಕಟ್ಟುವ ವೈಖರಿಯೂ ಆಶ್ಚರ್ಯ ತರಿಸುವಂತಹದ್ದು. ಹುಲ್ಲು-ಕಡ್ಡಿಗಳನ್ನು ಮೊದಲು ತಂದು ಗೂಡಿಗೆ ಆಕಾರ ಕೊಟ್ಟಿತು. ಆಮೇಲೆ ಮೆತ್ತನೆಯ ಹುಲ್ಲಿನ ತೆನೆಗಳನ್ನು ತಂದು ಗೂಡನ್ನು ಬೆಚ್ಚಗಿರಿಸಿತು. ಅದಲ್ಲದೇ ತನ್ನ ಆಕಾರ-ಗಾತ್ರಕ್ಕೆ ಸರಿಹೊಂದುವ ರಂಧ್ರದ ಬಾಗಿಲಿರಿಸಿ ಬೇರೆಲ್ಲವನ್ನೂ ಅಡಗಿಸಿಟ್ಟತು. ಐದಾರು ದಿನಗಳಲ್ಲಿ ಗೂಡು ಸಂಪೂರ್ಣ! ಆಮೇಲೆ ಅಲ್ಲೇ ವಾಸ್ತವ.


ಸುಮಾರು 20 ದಿನಗಳ ರಜೆಯ ನಂತರ ಮನೆಗೆ ಬಂದಾಗ ಆಶ್ಚರ್ಯ ಕಾದಿತ್ತು. “ಚೀಂವ್.... ಚೀಂವ್.... ಚೀಂವ್.... ಚೀಂವ್....” ಮರಿಗಳ ಕೂಗಾಟ!...ಮರಿಗಳ ಹೊಟ್ಟೆ ತುಂಬಿಸಲು ತಂದೆ-ತಾಯಿಗಳ ಪರದಾಟ! ತಂದೆ-ತಾಯಿಗಳು ಒಟ್ಟಿಗೆ ಹೋಗಿ ಬೇರೆ ಬೇರೆ ಕಾಳುಗಳನ್ನು ತಂದು ಮರಿಗ ಳಿಗೆ ತಿನ್ನಿಸುತ್ತಿದ್ದವು. ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪ್ರತೀ ಅರ್ದ-ಮುಕ್ಕಾಲು ಗಂಟೆಗೊಮ್ಮೆ ಆಹಾರ ತಿನ್ನಿಸುತ್ತಿದ್ದವು. ಮರಿಗಳಿಗೆ ರಾತ್ರಿಯಲ್ಲಿ ಅಮ್ಮನ ಮಡಿಲಿನ ರಕ್ಷಣೆ! ನೋಡು ನೋಡುತ್ತಲೇ ಹಕ್ಕಿಗಳು ದೊಡ್ಡದಾದವು. ಪೋಷಕ ಹಕ್ಕಿಗಳಿಗಾಗಿ ಕಾಯುತ್ತಾ ಗೂಡಿನಿಂದ ಹೊರಗೆ ನೋಡುತ್ತಿದ್ದವು. ಸುಮಾರು 3 ವಾರಗಳ ನಂತರಮರಿಗಳು ಸಂಪೂರ್ಣಬಲಿತು ದೊಡ್ಡದಾದವು. ಈಗ ಮರಿಗಳಿಗೆಹಾರಲು ಕಲಿಸುವ ಪಾಠ. ಇದು ಇನ್ನೂ ಕುತೂಹಲಕಾರಿ! ತಂದೆ-ತಾಯಿಗಳು ಹೊರಕ್ಕೆ-ಒಳಕ್ಕೆ ಹೋಗಿಬರುವುದು...ಬಾಲ್ಕನಿಯ ಗ್ರಿಲ್ ಮೇಲೆ ಕುಳಿತು ಅಹಾರಕ್ಕಾಗಿ ಮರಿಗಳನ್ನು ಕರೆಯುವುದು...ಇತ್ಯಾದಿ. ಹಾರಲು ಕಲಿತ ಯುವ ಹಕ್ಕಿಗಳನ್ನು ಒಂದು ಮುಂಜಾನೆ ಒಂದೊಂದಾಗಿ ಕಾಡಿಗೆ ಕೊಂಡೋಯಿತು! ಅಬ್ಬಾ! ಇಷ್ಟು ಪುಟ್ಟ ಹಕ್ಕಿಯ ಕರ್ತವ್ಯ ನಿಷ್ಟೆಯೇ!...ನಿಭಾಯಿಸುವ ಜವಾಬ್ದಾರಿಯೇ!...

      ಎರಡು-ಮೂರು ವಾರ ಕಳೆದಿರಬಹುದು. ಇನ್ನೊಮ್ಮೆ ಜೋಡಿ ಹಕ್ಕಿಗಳು (ಮೊದಲ ಜೋಡಿಯೋ ಏನೋ ಗೊತ್ತಿಲ್ಲ) ಬಂದು ಅದೇ ಗೂಡನ್ನು ವಾಸವ್ಥಾನವಾಗಿ ಆರಿಸಿಕೊಂಡವು. ಈ ಬಾರಿ ಕೆಲಸ ಸುಲಭ...! ಗೂಡನ್ನು ನವೀಕರಿಸುವುದೊಂದೇ ಕೆಲಸ. ಪುನಃ ತುಳಸಿ ಎಲೆ, ಕರಿಬೇವಿನ ಎಲೆಗಳನ್ನು ತಂದು ಜೊಡಿಸಿ, ಹುಲ್ಲಿನ ತೆನೆಗಳನ್ನು ಹಾಸಿ ಗೂಡನ್ನು ನವೀಕರಿಸಿದವು. ಒಂದಂತೂ ಖಾತ್ರಿಯಾಯಿತು....ತುಳಸಿ ಮತ್ತು ಕರಿಬೇವಿನ ಔಷಧೀಯ ಗುಣಗಳು ಈ ಪುಟ್ಟ ಹಕ್ಕಿಗೆ ಖಂಡಿತ ಗೊತ್ತಿದೆ!! ಮತ್ತೊಮ್ಮೆ ಸಂಸಾರ ಮಾಡಿ ಎರಡು ಮರಿಗಳನ್ನು ಬೆಳೆಸಿದವು. ಹಾಗೆಯೇ ಒಟ್ಟು ಮೂರು ಭಾರಿ ಗೂಡು ಕಟ್ಟಿ, ಒಟ್ಟು ಎಂಟು ಮರಿಗಳನ್ನು ಬೆಳೆಸಿದವು. ಕಾಡಿಗಿಂತ ಸುರಕ್ಷಿತ ಜಾಗ ಸಿಕ್ಕಾಗ ಉಪಯೋಗಿಸಬೇಕಲ್ಲವೇ?...
      ನಾಲ್ಕನೇ ಭಾರಿ ಮಾತ್ರ ಕೆಲಸ ಸುಲಭವಾಗಿರಲಿಲ್ಲ. ಮೂರು ಬಾರಿ ಮೊಟ್ಟೆ ಇಟ್ಟು, ಮರಿ ಮಾಡಿದ ಗೂಡು ತುಂಬಾ ಗಲೀಜಾಗಿರಬೇಕು. ಗೂಡನ್ನು ಸ್ವಚ್ಛಗೊಳಿಸಲು ಜೋಡಿ ಹಕ್ಕಿಗಳು ಒಂದು ವಾರ ಪ್ರಯತ್ನಿಸಿದವು. ಇಲ್ಲ..ಸಾಧ್ಯವೇ ಇಲ್ಲ...ಎಂದು ಹಕ್ಕಿಗಳು ಗೂಡು ಬಿಟ್ಟು ಹಾರಿ ಹೋದವು. ಎರಡು ತಿಂಗಳ ನಂತರ ನಾವು ಗೂಡನ್ನು ತೆಗೆದು ಬಿಡಿಸಿ ನೋಡಿದಾಗ, ಅದು ನಿಜಕ್ಕೂ ವಾಸಿಸಲಸಾದ್ಯವಾದಸ್ಟು ಗಲೀಜಾಗಿತ್ತು. ಅಬ್ಬಾ ಪುಟ್ಟ ಹಕ್ಕಿಯ ಆರೋಗ್ಯ ಕಾಳಜಿಯೇ! ಕುತೂಹಲದಿಂದ ಆ ಗೂಡಿನ ಪೆಟ್ಟಿಗೆಯನ್ನು ತೆಗೆದು ಇನ್ನೊಂದು ಖಾಲಿ ಪೆಟ್ಟಿಗೆಯನ್ನು ಜೊಡಿಸಿದೆವು. ಮರುದಿನವೇ ಹಕ್ಕಿ ಪ್ರತ್ಯಕ್ಷ! ಗೂಡು ಕಟ್ಟಲು ಶುರು! ಅಂದಿನಿಂದ ಮತೊಮ್ಮೆ ಪುಟ್ಟ ಹಕ್ಕಿಯ ಸಂಸಾರ...!ಈ ಪುಟ್ಟ ಹಕ್ಕಿ ನಮ್ಮ ಕುತೂಹಲವನ್ನು ಕೆರಳಿಸಿದ್ದಲ್ಲದೆ ಪ್ರಕೃತಿಯ ಬಗ್ಗೆ ಸಾಕಷ್ಟು ತಿಳಿಸಿಕೊಟ್ಟಿತು.
     ಈ ಮುನಿಯಾದ ವೈಜ್ಞಾನಿಕ ಹೆಸರು “ಲೊಂಚುರಾ ಕೆಲಾರ್ಟಿ”. ದಕ್ಷಿಣ ಭಾರತ ಹಾಗೂ ಶ್ರೀಲಂಕಾದಲ್ಲಿ ಕಂಡುಬರುವ ಈ ಹಕ್ಕಿಯು ಮುಖ್ಯವಾಗಿ ಗುಡ್ಡಪ್ರದೇಶ ಮತ್ತು ಬೇಸಾಯದ ಗದ್ದೆಗಳಲ್ಲಿ ವಾಸಿಸುತ್ತವೆ. ಧಾನ್ಯ-ಕಾಳುಗಳನ್ನು ಸೇವಿಸಿ ಬದುಕುವ ಈ ಪಕ್ಷಿ ಸಾಮಾನ್ಯವಾಗಿ ಮರ, ಮನೆಮಾಡಿನಲ್ಲಿ ಹುಲ್ಲಿನ ಗುಮ್ಮಟಾಕಾರದ ಗೂಡು ಕಟ್ಟಿ ಮರಿ ಮಾಡುತ್ತದೆ. ಒಂದು ಸಲಕ್ಕೆ 3-5 ಮೊಟ್ಟೆಯಿಟ್ಟು ಮರಿ ಮಾಡುವ ಈ ಹಕ್ಕಿಯು ಗುಬ್ಬಚ್ಚಿಯಂತೆ ಮನುಷ್ಯರ ಒಡನಾಟದಲ್ಲಿಯೂ ವಾಸಿಸುತ್ತದೆ.  

ನಾಗರಾಜ ಅಡಿಗ.
ವೈಜ್ಞಾನಿಕ  ಅಧಿಕಾರಿ, ಕೈಗಾ ವಿದ್ಯುತ್ ಉತ್ಪಾದನಾ ಕೇಂದ್ರ, ಕೈಗಾ.

Saturday, 20 February 2016

ರಾಷ್ಟ್ರ ಲಾಂಛನಕೊಂದು ಸೆಲ್ಯೂಟ್.....



ರಾಷ್ಟ್ರ ಲಾಂಛನಕ್ಕೊಂದು ಸೆಲ್ಯೂಟ್....
ಸೆಪ್ಟೆಂಬರ್ ತಿಂಗಳ ಒಂದು ಸಂಜೆ. ಆಗಷ್ಟೆ ಮಳೆಗಾಲ ಮುಗಿದಿತ್ತು. ಆಕಾಶ ಸ್ವಚ್ಛವಾಗಿತ್ತು...ಮಳೆಬರುವ ಸಾಧ್ಯತೆ ಕಮ್ಮಿ ಇತ್ತು. ಫೋಟೋ ತೆಗಿಯೋಣ ಎಂದು ಕ್ಯಾಮರಾ ತೆಗೆದು ಹೊರನಡೆದೆ. ಹಾಗಂತ ನಾನೇನು ಛಾಯಾಗ್ರಾಹಕನಲ್ಲ...ಹೊಸದಾಗಿ ಖರೀದಿಸಿದ ಕ್ಯಾಮರಾದಿಂದ ಆಗೊಮ್ಮೆ ಈಗೊಮ್ಮೆ ಫೋಟೋ ತೆಗೆಯುತ್ತಿದ್ದೆ...ಪ್ರಕೃತಿ ಹಾಗೂ ಪಕ್ಷಿಗಳ ವೀಕ್ಷಣೆ ಮತ್ತು ಫೋಟೋಗ್ರಾಫಿಯಲ್ಲಿ ಸ್ವಲ್ಪ ಆಸಕ್ತಿ. ಮುಂಚಿನ ದಿನವಷ್ಟೇ ಸಾಕಷ್ಟು ಹಕ್ಕಿಗಳನ್ನು ನೋಡಿದ್ದ ಜಾಗಕ್ಕೆ ಆಕ್ಟೀವಾ ಓಡಿಸಿಕೊಂಡು ಹೊದೆ. ನನ್ನ ನಿರೀಕ್ಷೆ ಹುಸಿಯಾಯಿತು. ಕಾಗೆಗನ್ನು ಬಿಟ್ಟರೆ ಬೇರೆ ಹಕ್ಕಿಗಳೇ ಕಾಣಿಸುತ್ತಿಲ!!್ಲ...ಕಾಗೆಗಳಂತೂ ತುಂಬಾ ಸಂಖ್ಯೆಯಲ್ಲಿದವು. ನಿರಾಸೆಯಾಯಿತು. ಸರಿ, ಇನ್ನೊಂದೆಡೆ ಹೋಗೋಣವೆಂದು ಹತ್ತಿರದ ಬಯಲು ಪ್ರದೇಶಕ್ಕೆ ಹೋದೆ. ಅಲ್ಲಿಯೂ ಹಕ್ಕಿಗಳು ವಿರಳವಾಗಿದ್ದವು. ಹಕ್ಕಿಗಳು ಅಂದಿನ ದಿನಚರಿಯನ್ನು ಬೇಗನೇ ಮುಗಿಸಿ ಗೂಡು ಸೇರಿರಬೇಕು.! ಛೆ! ಇವತ್ತು ಹೊರಬಂದ ಟೈಮೇ ಸರಿಯಿಲ್ಲ ಅಂದುಕೊಂಡೆ. ನೆಲದಮೇಲೆ ಹುಲ್ಲಿನ ಮಧ್ಯೆಯಲ್ಲಿ ಚಿಕ್ಕ ಚಿಕ್ಕ ಹೂಬಿಟ್ಟ ಗಿಡಗಳು ಕಾಣಿಸಿದವು..ಆ ಹೂವುಗಳು ಮುಸ್ಸಂಜೆಯಲ್ಲಿ ಅರಳುವ ಹೂವಾಗಿದ್ದರಿಂದ ತಾಜಾ ಆಗಿದ್ದವು...ಫೋಟೋ ತೆಗೆಯುತ್ತಿದ್ದೆ...ಆ ಹೂವುಗಳು ಚಿಕ್ಕದಾಗಿದ್ದರೂ ಸುಂದರವಾಗಿದ್ದವು. ಮಳೆಗಾಲದಲ್ಲಿ ಬೆಳೆಯುವ ಈ ಸಸ್ಯಗಳ ಹೂವು ಅರಳುವುದು ಮುಸ್ಸಂಜೆಯಲ್ಲಿ...ಆ ಸಮಯದಲ್ಲಿ ಸೂರ್ಯನ ಬೆಳಕು ಪ್ರಕಾಶಮಾನವಾಗಿರುವುದೇ ಅಪರೂಪ... ಇವತ್ತೂ ಇದೇ ಸಮಸ್ಯೆ...ಒಂದೈದು ನಿಮಿಷದಲ್ಲಿ ಪಶ್ಚಿಮಯಲ್ಲಿ ಮೇಲೇರಿದ ಮೋಡ ಇಡೀ ಸೂರ್ಯನನ್ನು ನುಂಗಿಯೇ ಬಿಟ್ಟಿತು.! ಫೋಟೋ ತೆಗೆಯಲು ಬೆಳಕು ಕಡಿಮೆಯನಿಸಿತು...ತೆಗೆದ ಫೋಟೋ ಸಹ ಮಬ್ಬಾಗಿ ಬರುತ್ತಿತ್ತು...ಅದೃಷ್ಟವನ್ನು ಹಳಿಯುತ್ತಾ ಮನೆಯಕಡೆಗೆ ಹೆಜ್ಜೆಹಾಕಿದೆ. ಅಚಾನಕ್ ತುಂಡು ಮೋಡ ಬದಿಸರಿದು ಸೂರ್ಯದೇವನನ್ನು ಬಂಧಮುಕ್ತವಾಗಿಸಿತು..!! ಸಿಟ್ಟಿನಿಂದ ಸೂರ್ಯಬಿಟ್ಟ ಕೆಂಗಣ್ಣಿನಿಂದಲೋ ಅಥವಾ ಸೂರ್ಯನನ್ನು ಅಡ್ಡ ಮಾಡಿದ ತಪ್ಪಗೆ ನಾಚಿಯೋ ಎನೋ, ಸೂರ್ಯನ ಸುತ್ತುವರಿದ ಮೋಡವೆಲ್ಲಾ ಕೆಂಪಣ್ಣಕ್ಕೆ ತಿರುಗಿತ್ತು.!!! ಪಡುವಣದಲ್ಲಿ ಮೋಡಗಳಿಂದ ವಿಧವಿಧವಾಗಿ ಮೂಡಿದ ಚಿತ್ರಣಗಳು ಅದ್ಭುತವಾಗಿತ್ತು....ಖುಷಿಯಾಯಿತು..ಸೂರ್ಯಾಸ್ತದ ಫೋಟೋ ತೆಗೆಯಲು ಶುರುಮಾಡಿದೆ..ಬೇರೆ ಬೇರೆ ಸೆಟ್ಟಿಂಗ್‍ಗಳಲ್ಲಿ ಫೋಟೋ ಕ್ಲಿಕ್ಕಿಸಿದೆ...ಮುಂಬದಿಯಲ್ಲಿ ಬೇರೆ ಬೇರೆ ಮರಗಳನ್ನಿಟ್ಟಕೊಂಡು ಫೋಟೋ ಜೋಡಿಸಿದೆ...ಹಕ್ಕಿಗಳ ಫೋಟೋ ಅಲ್ಲವಾದರೂ ಸೂರ್ಯಾಸ್ತದ ಫೋಟೋ ಸಿಕ್ಕಿತ್ತಲ್ಲಾ ಎಂದು ಖುಷಿಪಟ್ಟೆ.. ಸೂರ್ಯನಿಗೆ ಅಡ್ಡಬಂದ ಮೋಡಕ್ಕೂ, ಮೋಡಕ್ಕೆ ಕೆಂಬಣ್ಣ ಎರೆಚಿದ ಸೂರ್ಯನಿಗೂ ಥ್ಯಾಕ್ಸ್ ಹೇಳಿದೆ. ಮನೆಗೆ ಬಂದು ಫೋಟೋಗಳನ್ನು ಕಂಪ್ಯೂಟರ್‍ನಲ್ಲಿ ನೋಡುವ ತವಕ...ಅದರಲ್ಲಿ ಒಂದು ಫೋಟೋ ಮಾತ್ರ ವಿಶಿಷ್ಟವಾಗಿ ಕಂಡುಬಂತು...ಫೋಟೋವನ್ನು ಸ್ವಲ್ಪ ತಿರುಗಿಸಿದಾಗ ತುಂಡುಮೋಡದ ಒಂದು ಬದಿಯಲ್ಲಿ ರಾಷ್ಟ್ರ ಲಾಂಛನವೇ ಮೂಡಿತ್ತು.!!! ಕೂಡಲೇ “ಜೈಹಿಂದ್” ಎಂದು ಸೆಲ್ಯೂಟ್ ಮಾಡಿದೆ.!!! ಲಾಂಛನ ಹಿಂದಿದ್ದ ಸೂರ್ಯನ ಕಿರಣಗಳಿಂದ ಲಾಂಛನವೇ ಬೆಳಕನ್ನು ಸೂಸುವಂತೆ ಕಾಣಿಸುತ್ತಿತ್ತು.!!! ಆಹಾ! ಎಂತಹಾ ಅದ್ಭುತ ಕಲಾಕೃತಿ!. ಪ್ರಕೃತಿಯೂ ಅದ್ಭುತ ಕಲಾವಿದನಲ್ಲವೇ?!!

ನಾಗರಾಜ ಅಡಿಗ, ಕೈಗಾ ಅಣು ವಿದ್ಯುತ್ ಕೇಂದ್ರ, ಕೈಗಾ.